ಕೃಷಿ ವಲಯವನ್ನು ಉಳಿಸಿ ಬೆಳೆಸುವಲ್ಲಿ ಯುವ ಜನತೆಯ ಪಾತ್ರ ಮುಖ್ಯ: ಜಾನಕಿ
ಮಂಗಳೂರು, ಜು.7: ಕೃಷಿ ವಲಯವನ್ನು ಮತ್ತು ಪ್ರಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಯುವ ಜನತೆಯ ಅಪಾರವಾದ ಪಾತ್ರವನ್ನು ನಿರ್ವಹಿಸಬೇಕಿದೆ ಎಂದು ಮಂಗಳೂರು ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕಿ ಜಾನಕಿ ಹೇಳಿದರು.
‘ಯುವ ರೆಡ್ಕ್ರಾಸ್’ ಘಟಕ, ಗಿರಿಜಾ ಚಾರಿಟೇಬಲ್ ಟ್ರಸ್ಟ್ ಹಾಗೂ ತೋಟಗಾರಿಕೆ ಇಲಾಖೆಯ ಜಂಟಿ ಆಶ್ರಯದಲ್ಲಿ ಮಂಗಳೂರು ಬ್ಲೂಮ್ ಟೀಮ್ನ ಸಹಕಾರದೊಂದಿಗೆ ನಗರದ ರಥಬೀದಿಯ ಡಾ.ಪಿ.ದಯಾನಂದ ಪೈ- ಪಿ.ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಜರುಗಿದ ‘ಹಸಿರು ಬೆಳೆಸುವ ಕಲೆ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಶೇಖರ ಹೆಬ್ಬಾರ್ ಸಿ. ಗಿಡ, ಮರ, ವನ್ಯಸಂಪತ್ತನ್ನು ರಕ್ಷಿಸುವ ಹೊಣೆ ನಮ್ಮೆಲ್ಲರದ್ದಾಗಿದೆ ಎಂದರು. ಸಿಂಡಿಕೇಟ್ ಬ್ಯಾಂಕ್ನ ಮ್ಯಾನೇಜರ್ ಸುರೇಶ್ ಶೆಣೈ, ಯುವ ರೆಡ್ಕ್ರಾಸ್ ಘಟಕದ ಸಂಯೋಜನಾಧಿಕಾರಿ ಡಾ.ಮಹೇಶ್ ಕೆ.ಬಿ.ಉಪಸ್ಥಿತರಿದ್ದರು. ಯುವ ರೆಡ್ ಕ್ರಾಸ್ನ ಸಂಯೋಜನಾಧಿಕಾರಿ ಪ್ರೊ.ನಯನಕುಮಾರಿ ಸ್ವಾಗತಿಸಿದರು.
ಪ್ರೊ.ಮಣಿಭೂಷಣ್ ಡಿಸೋಜ ವಂದಿಸಿದರು. ವಿದ್ಯಾರ್ಥಿನಿ ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು.