ನೆರೆಯ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ: ಶೋಭಾ
ಉಡುಪಿ, ಆ.9: ಹೈಕಮಾಂಡ್ ಸೂಚನೆಯಂತೆ ಸಚಿವ ಸಂಪುಟ ವಿಸ್ತರಣೆ ಚರ್ಚಿಸಲು ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸುಷ್ಮಾ ಸ್ವರಾಜ್ ನಿಧನ ಹಾಗೂ ಉತ್ತರ ಕರ್ನಾಟಕ ನೆರೆಯ ಹಿನ್ನೆಲೆಯಲ್ಲಿ ವಾಪಾಸ್ಸು ಬಂದಿದ್ದು, ಇದರಿಂದ ಸಚಿವ ಸಂಪುಟ ವಿಸ್ತರಣೆ ಮುಂದೂಡ ಲಾಗಿದೆ. ನೆರೆಯ ಸಮಸ್ಯೆ ಮುಗಿದ ನಂತರ ಮತ್ತೆ ದೆಹಲಿ ಹೋಗಿ ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ಚರ್ಚೆ ಮಾಡಲಿದ್ದಾರೆ ಎಂದು ಉಡುಪಿ ಚಿಕ್ಕಮಗ ಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಸಂಬಂಧ ಪರಿಹಾರ ನೀಡುವಂತೆ ಇನ್ನು ಕೂಡ ಕೇಂದ್ರಕ್ಕೆ ಪತ್ರ ಬರೆದಿಲ್ಲ. ಅದಕ್ಕಿಂತ ಮೊದಲು ನಷ್ಟದ ವೌಲ್ಯಮಾಪನ ಆಗಬೇಕಾಗಿದೆ. ಮುಖ್ಯಮಂತ್ರಿ ಗಳು ಈ ಕುರಿತು ಪರಿಶೀಲನೆ ಮಾಡುತ್ತಿದ್ದಾರೆ. ಮುಂದೆ ಇನ್ನು ಹೆಚ್ಚಿನ ಮಳೆ ಹಾಗೂ ಮಳೆಹಾನಿಯಾಗುವ ಸಾಧ್ಯತೆ ಇದೆ. ಅದನ್ನೆಲ್ಲ ನೋಡಿ ಕೊಂಡು ಕೇಂದ್ರಕ್ಕೆ ಪತ್ರ ಬರೆಯಲಾಗುವುದು ಎಂದರು.
ಯಡಿಯೂರಪ್ಪ ಎಲ್ಲಿದೀಯಪ್ಪ ಎಂಬ ಕುಮಾರಸ್ವಾಮಿ ಲೇವಡಿಗೆ ಪ್ರತಿಕ್ರಿ ಯಿಸಿದ ಅವರು, ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡ ನಂತರ ಬೇಸತ್ತಿದ್ದಾರೆ, ನೊಂದಿದ್ದಾರೆ ಮತ್ತು ಸಿಟ್ಟಿನಲ್ಲಿದ್ದಾರೆ. ಅಧಿಕಾರ ಇಲ್ಲದೆ ಭ್ರಮ ನಿರಸನಗೊಂಡು ಪ್ರಶ್ನಿಸುವ ಕುಮಾರಸ್ವಾಮಿಗೆ ಉತ್ತರಿಸುವ ಅಗತ್ಯ ಇಲ್ಲ. ಯಡಿಯೂರಪ್ಪ ನಿರಂತರವಾಗಿ ಜನರ ಜೊತೆಗೆ ಇದ್ದಾರೆ ಎಂದು ತಿಳಿಸಿದರು.
ಕಾಶ್ಮೀರದ ವಿಶೇಷ ಸ್ಥಾನಮಾನ ರದ್ಧುಗೊಳಿಸುವಂತೆ ದೇಶದ ಕೂಗು ಆಗಿತ್ತು ಮತ್ತು ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಲಾಗಿತ್ತು. ಅದರಂತೆ ನಾವು ಅಧಿಕಾರಕ್ಕೆ ಬಂದು ನಡೆದುಕೊಂಡಿದ್ದೇವೆ. ಈ ವಿಚಾರದಲ್ಲಿ ಕಾಂಗ್ರೆಸ್ನ ದಿವಾಳಿತನ ಮತ್ತು ದೇಶದ್ರೋಹ ಈಗಲೂ ಮುಂದುವರೆದಿದೆ ಎಂದ ಅವರು, ಅಖಂಡ ಭಾರತಕ್ಕೆ ಮೊದಲು ಪಿಓಕೆ ಸೇರಿದ ಕಾಶ್ಮೀರ ಮೊದಲು ನಮ್ಮ ಕೈಗೆ ಬರಲು ನಂತರ ಬಲೂಚಿಸ್ತಾನವನ್ನು ಸೇರಿಸುವ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿದರು.