ಉಳ್ಳಾಲ ನಗರಸಭೆಯಲ್ಲಿ ಸಂತ್ರಸ್ತರಿಗೆ ದಿನಸಿ ಕಿಟ್ ವಿತರಣೆ
ಉಳ್ಳಾಲ: ನೆರೆಯಿಂದಾಗಿ ಸಾವಿರಾರು ಕುಟುಂಬಗಳು ಬಹಳಷ್ಟು ತೊಂದರೆಗೆ ಒಳಟ್ಟಿದ್ದು ಕೃಷಿಭೂಮಿ, ಆಸ್ತಿ, ಕಾಪಡಿಕೊಂಡು ಬಂದಿದ್ದು ದಾಖಲೆ ಪತ್ರಗಳು ಸೇರಿದಂತೆ ಬದುಕು ಹೈರಾಣಾಗುವಂತೆ ಮಾಡಿದೆ. ನೆರೆಯಲ್ಲಿ ಕೆಲವರು ಕಡಿಮೆ, ಇನ್ನು ಕೆಲವರಿಗೆ ಹೆಚ್ಚು ನಷ್ಟವುಂಟಾಗಿದ್ದು ಅದರ ಬಗ್ಗೆ ಸದ್ಯಕ್ಕೆ ಲೆಕ್ಕ ಹಾಕುವುದು ಕಷ್ಟದ ಕೆಲಸ. ಹಾಗಾಗಿ ಸಂತ್ರಸ್ತರು ನೆಮ್ಮದಿಯ ಜೀವನ ಸಾಗಿಸಲು ಅಗತ್ಯವಿರುವ ವಸ್ತುಗಳನ್ನು ಪೂರೈಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
ಉಳ್ಳಾಲ ನಗರಸಭೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ನೆರೆ ಸಂತ್ರಸ್ಥರಿಗೆ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು.
ನಾವು ನೀಡುತ್ತಿರುವ ಸಣ್ಣ ಮಟ್ಟದ ಪರಿಹಾರ ಕಿಟ್ ನಿಜವಾಗಿ ತೊಂದರೆ, ಕಷ್ಟ, ನಷ್ಟಕ್ಕೊಳಗಾದವರು ಮಾತ್ರವೇ ಪಡೆಯಬೇಕು. ಅದರ ದುರುಪಯೋಗ ತಡೆಯುವ ನಿಟ್ಟಿನಲ್ಲಿ ಅ„ಕಾರಿಗಳಿಗೆ ಸಹಕಾರ ನೀಡುವ ಮೂಲಕ ಅರ್ಹರಿಗೆ ಕಿಟ್ ದೊರಕುವಂತೆ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ನೆರೆಪೀಡಿತ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಬೇಕಿದ್ದು ಅದಕ್ಕಾಗಿ ಪ್ಯಾಕೆಟ್ ಕ್ಲೋರಿನ್ ಉಚಿತವಾಗಿ ನೀಡಲಾಗುತ್ತಿದೆ. ವೈದ್ಯರ ತಂಡ ಸಿದ್ಧವಾಗಿ ನಿಂತಿದೆ ಎಂದು ಹೇಳಿದರು.
ಉಳ್ಳಾಲದಲ್ಲಿ ಸುಸಜ್ಜಿತ ಆಸ್ಪತ್ರೆ: ಉಳ್ಳಾಲದ ಜನರ ಸುದೈವ ಅಂದರೆ ಉಳ್ಳಾಲದ ಹೃದಯ ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆ ಇರುವುದು ಇಲ್ಲಿನ ಜನರ ಯೋಗ. ಐವರು ನುರಿತ ವೈದ್ಯರು ಆಸ್ಪತ್ರೆಯಲ್ಲಿದ್ದು, ಆಪರೇಶನ್ ಥಿಯೇಟರ್ ಮತ್ತು ಲ್ಯಾಬ್ ಖಾಸಗಿ ಆಸ್ಪತ್ರೆಯಲ್ಲೂ ಇಲ್ಲ. ಕಾಯಿಲೆ ಬಂದಾಗ ಎಲ್ಲೆಲ್ಲಿಗೂ ಅಲೆದಾಡದೆ, ಸ್ವತಃ ವೈದ್ಯರಾಗುವ ಸಾಹಕ್ಕಿಳಿಯದೆ ಆಸ್ಪತ್ರೆಯ ಪ್ರಯೋಜನ ಪಡೆಯಬೇಕು. ಅಷ್ಟೊಂದು ಯೋಜನೆ ಗಳನ್ನು ಉಳ್ಳಾಲಕ್ಕೆ ತರುವಂತಾಗಲು ನೀವು ನೀಡಿರುವ ಮತವೇ ಕಾರಣ ಎಂದು ಹೇಳಿದರು.
ನಗರಸಭೆಯ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ಪೌರಾಯುಕ್ತೆ ವಾಣಿ ವಿ.ಆಳ್ವ ಸ್ವಾಗತಿಸಿದರು.