ಮೇ 9ರಿಂದ ‘ಕೃಷಿರಂಗ’ ಮಕ್ಕಳ ಬೇಸಿಗೆ ಶಿಬಿರ
ಮಂಗಳೂರು, ಮೇ 4: ವಿದ್ಯಾರ್ಥಿಗಳಲ್ಲಿ ಕೃಷಿ ಚಟುವಟಿಕೆಗೆ ಉತ್ತೇಜನ ನೀಡಲು ಇದೇ ಮೊದಲ ಬಾರಿಗೆ ಮಕ್ಕಳ ಬೇಸಿಗೆ ಶಿಬಿರ ಮಂಗಳೂರಿನ ಎಕ್ಕೂರಿನಲ್ಲಿರುವ ಮೀನುಗಾರಿಕಾ ಮಹಾವಿದ್ಯಾಲಯದ ಆವರಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಲಿದೆ.
ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ ಜಿಲ್ಲೆ, ಪ್ರೊಫೆಷನಲ್ ಫಿಶರೀಶ್ ಗ್ರಾಜುಯೇಟ್ಸ್ ಫೋರಂ ಮುಂಬೈ, ಸ್ಕೂಬ ಸಾಂಸ್ಕೃತಿಕ ತಂಡ, ಮೀನುಗಾರಿಕೆ ಮಹಾವಿದ್ಯಾಲಯ ಮತ್ತು ಸಂಕೇತ, ಮಂಗಳೂರು ಜಂಟಿಯಾಗಿ ಮೇ 9ರಿಂದ 14ರವರೆಗೆ ಮಕ್ಕಳಿಗೆ ಕೃಷಿಯಲ್ಲಿ ಆಸಕ್ತಿ ಮೂಡಿಸಲು ಕೃಷಿರಂಗ ಎನ್ನುವ ಮಕ್ಕಳ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರದಲ್ಲಿ ಮಕ್ಕಳಿಗೆ ಹೈನುಗಾರಿಕೆ, ಕೋಳಿಸಾಕಣೆ, ಕೃಷಿ, ಅಲಂಕಾರಿಕ ಮೀನು ಸಾಕಣೆ, ವೈಜ್ಞಾನಿಕ ಚಲನಚಿತ್ರ ವೀಕ್ಷಣೆ ಮತ್ತು ರಂಗ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಲಾಗುವುದು.
ವಿದ್ಯಾರ್ಥಿಗಳಿಗೆ 500 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಮೊದಲು ಹೆಸರು ನೋಂದಾಯಿಸಿದ 50 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಆಸಕ್ತರು ಭಾಗ್ಯ ಮೊ.ಸಂ.:7795249745ನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಪ್ರಕಟನೆ ತಿಳಿಸಿದೆ.