ಮಲ್ಪೆ ಮೀನುಗಾರರಿಂದ ಸಾಮೂಹಿಕ ಸಮುದ್ರಪೂಜೆ
ಮಲ್ಪೆ, ಆ.15: ಮಲ್ಪೆ ಮೀನುಗಾರ ಸಂಘದ ನೇತೃತ್ವದಲ್ಲಿ ಗುರುವಾರ ಮೀನುಗಾರರಿಂದ ಸಾಮೂಹಿಕ ಸಮುದ್ರಪೂಜೆ ಮಲ್ಪೆ ವಡಭಾಂಡೇಶ್ವರ ಸಮುದ್ರ ತೀರದಲ್ಲಿ ಜರಗಿತು.
ಮೀನುಗಾರರು ಬೆಳಗ್ಗೆ ವಡಭಾಂಡೇಶ್ವರದ ಬಲರಾಮ ಮತ್ತು ಬೊಬ್ಬರ್ಯ ದೇವರಿಗೆ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಶೋಭಾಯಾತ್ರೆಯ ಮೂಲಕ ಸಮುದ್ರ ಕಿನಾರೆಗೆ ತೆರಳಿ, ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
ಮುಂಬರುವ ದಿನಗಳಲ್ಲಿ ಮೀನುಗಾರಿಕೆಗೆ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ, ಹೇರಳ ಮತ್ಸ ಸಂಪತ್ತು ವೃದ್ದಿಯಾಗಬೇಕು. ಸಮುದ್ರದಲ್ಲಿ ಮೀನು ಗಾರಿಕೆ ನಡೆಸುವ ವೇಳೆ ಯಾವುದೇ ಅವಘಡಗಳು, ಪ್ರಾಕೃತಿಕ ವಿಕೋಪಗಳು ಉಂಟಾಗದಂತೆ, ಮೀನುಗಾರರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳು ಬಾರದೆ ಪರಸ್ಪರ ಐಕ್ಯತೆ, ಸೌಹಾರ್ದತೆಯಿಂದ ಒಗ್ಗಟ್ಟಾಗಿ ಮೀನುಗಾರಿಕೆ ಯನ್ನು ನಡೆಸುವಂತೆ ಗಂಗಾಮಾತೆ ಅನುಗ್ರಹವನ್ನು ನೀಡುವಂತೆ ಪ್ರಾರ್ಥಿಸಿ ಹಾಲು, ಸೀಯಾಳ, ಲಪುಷ್ಪವನು್ನ ಸಮುದ್ರರಾಜನಿಗೆ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್, ಮೀನುಗಾರ ಸಂಘದ ಅಧ್ಯಕ್ಷ ಕೃಷ್ಣ ಎಸ್.ಸುವರ್ಣ, ಮೀನುಗಾರಿಕಾ ಉಪ ನಿರ್ದೇಶಕ ಗಣೇಶ್ ಕೆ., ಸಹಾಯಕ ನಿರ್ದೇಶಕ ಶಿವಕುಮಾರ್, ಮೀನುಗಾರಿಕಾ ವಿವಿಧ ಸಂಘಟನೆಗಳ ಮುಖಂಡರುಗಳಾದ ಯಶ್ಪಾಲ್ ಎ.ಸುವರ್ಣ, ನಾಗರಾಜ್ ಸುವರ್ಣ, ನಾಗರಾಜ್ ಬಿ.ಕುಂದರ್, ಸತೀಶ್ ಕುಂದರ್, ಗೋಪಾಲ್ ಆರ್.ಕೆ., ಸೋಮನಾಥ್ ಕಾಂಚನ್, ಹರಿಯಪ್ಪ ಕೋಟ್ಯಾನ್, ಸುಧಾಕರ ಮೆಂಡನ್, ರಮೇಶ್ ಕೋಟ್ಯಾನ್, ರಾಮ ಕಾಂಚನ್, ದಯಾನಂದ ಕುಂದರ್, ರಾಮಚಂದ್ರ ಕುಂದರ್, ಸಾಧು ಸಾಲ್ಯಾನ್, ಜಲಜ ಕೋಟ್ಯಾನ್, ಬೇಬಿ ಎಚ್.ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.