'ಪ್ರಾರ್ಥನೆ ದೇವರಿಗೆ ಸಮೀಪವಾಗಲು ಇರುವ ಪ್ರಮುಖ ಮಾರ್ಗ'
ಮಂಗಳೂರು ಬಿಷಪ್ ಪೀಟರ್ ಪಾವ್ಲ್ ಸಲ್ಡಾನಾ
ಉಡುಪಿ, ಆ.15: ಪ್ರಾರ್ಥನೆಯೊಂದೇ ಮನುಷ್ಯನಿಗೆ ದೇವರಿಗೆ ಸಮೀಪ ವಾಗಲು ಇರುವ ಮಾರ್ಗವಾಗಿದ್ದು, ಇದು ಪವಿತ್ರ್ಮಾರ ವರಗಳನ್ನು ಪಡೆಯುವ ಏಕೈಕ ವಿಧಾನ ಎಂದು ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅತಿ ವಂ. ಪೀಟರ್ ಪಾವ್ಲ್ ಸಲ್ಡಾನಾ ಹೇಳಿದ್ದಾರೆ.
ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚಿನಲ್ಲಿ ವೆಲಂಕಣಿ ಮಾತೆಯ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವದ ಕೊನೆಯ ದಿನದ ನೊವೆನಾ ಪ್ರಾರ್ಥನೆಯ ಬಲಿಪೂಜೆಯಲ್ಲಿ ಪ್ರಧಾನ ಧರ್ಮಗುರುಗಳಾಗಿ ಭಾಗವಹಿಸಿ ಸಂದೇಶ ನೀಡಿದರು.
ಮೇರಿ ಮಾತೆ ತನ್ನ ಇಡೀ ಜೀವಿತದಲ್ಲಿ ದೇವರ ಯೋಚನೆ ಮತ್ತು ಯೋಜನೆಗೆ ಅನುಗುಣವಾಗಿ ಬದುಕಿದ್ದಲ್ಲದೆ ಪಾಪರಹಿತವಾದ ಜೀವನ ಜೀವಿಸಿ ಪ್ರತಿಯೊಬ್ಬರಿಗೂ ಮಾದರಿಯಾದರು. ಇಂತಹ ಜೀವನ ಜೀವಿಸಲು ಅವರಿಗೆ ಶಕ್ತಿ ನೀಡಿದ್ದು ಪ್ರಾರ್ಥನೆ. ನಾವೂ ಕೂಡ ಪ್ರಾರ್ಥನೆಯ ಮೂಲಕ ದೇವರಿಗೆ ಸಮೀಪವಾಗಲು ಪ್ರಯತ್ನಿಸಬೇಕು ಎಂದರು.
ಚರ್ಚಿನ ಪ್ರಧಾನ ಧರ್ಮಗುರು ವಂ.ಆಲ್ಬನ್ ಡಿಸೋಜಾ, ವಾರ್ಷಿಕ ಮಹೋತ್ಸವ ಕಾರ್ಯಕ್ರಮದ ಸಂಚಾಲಕ ವಂ. ಪ್ರವೀಣ್ ಮೊಂತೆರೋ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೋನ್ಸಾ, ಚರ್ಚಿನ 18 ಆಯೋಗಗಳ ಸಂಚಾಲಕ ಫ್ರಾನ್ಸಿಸ್ ಫೆರ್ನಾಂಡಿಸ್ ಹಾಗೂ ಅತಿಥಿ ಧರ್ಮಗುರುಗಳು ಉಪಸ್ಥಿತರಿದ್ದರು.