ಕಾಲ್ನಡಿಗೆಯಲ್ಲೇ ಬೀಟ್ ನಡೆಸಿದ ಮಂಗಳೂರು ಪೊಲೀಸ್ ಆಯುಕ್ತ
ಮಂಗಳೂರು, ಆ.16: ‘ಮಳೆ ಬಂದು ರಸ್ತೆ ಹಾಳಾಗಿದೆ.., ಅಲ್ಲಲ್ಲಿ ಕಸದ ರಾಶಿ ಇದ್ದು, ಅದರ ಸೂಕ್ತ ವಿಲೇವಾರಿ ಮಾಡಿಸಿ...’ ಇದು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಶುಕ್ರವಾರ ತಮ್ಮದೇ ಕಲ್ಪನೆಯ ‘ನನ್ನ ಬೀಟ್-ನನ್ನ ಹೆಮ್ಮೆ’ ಹೊಸ ಗಸ್ತು ವ್ಯವಸ್ಥೆಗೆ ಚಾಲನೆ ನೀಡಿದ ಬಳಿಕ ನಡೆಸಿದ ಬೀಟ್ನಲ್ಲಿ ಕೇಳಿಬಂದ ದೂರು-ದುಮ್ಮಾನಗಳು.
ಅಚ್ಚರಿಯ ಸಂಗತಿ ಎಂದರೆ, ಸುಮಾರು ಎರಡು ಗಂಟೆ ಕಾಲ ಬೀಟ್ ಸಿಬ್ಬಂದಿ ಜೊತೆಗೆ ಕಾಲ್ನಡಿಗೆಯಲ್ಲೇ ಬೀಟ್ ನಡೆಸಿದ ಆಯುಕ್ತರಿಗೆ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಯಾವುದೇ ದೂರು ಕೇಳಿ ಬಂದಿಲ್ಲ ! ಶುಕ್ರವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ನಗರದ ಕಂಡತ್ಪಳ್ಳಿ ಭಾಗದಿಂದ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಬೀಟ್ ನಂ.8ರ ಗಸ್ತು ಸಿಬ್ಬಂದಿ ಈಶಪ್ರಸಾದ್ ಜೊತೆಗೆ ಕಮಿಷನರ್ ಡಾ.ಹರ್ಷ ಕೂಡ ಬೀಟ್ ನಡೆಸಿದರು.
ಬೀಟ್ ವೇಳೆ 8-10 ಮನೆಗಳು, ಅಂಗಡಿಮುಂಗಟ್ಟು, ಮಸೀದಿ, ಚರ್ಚ್ ಹಾಗೂ ಕೊನೆಯಲ್ಲಿ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಬೀಟ್ನ ಉದ್ದಕ್ಕೂ ಬೀಟ್ ಸಿಬ್ಬಂದಿಗೆ ಜೊತೆಯಾಗಿ ಕಮಿಷನರ್ ಡಾ.ಹರ್ಷ ಸಂಚರಿಸಿದರು.
ಇವರಿಬ್ಬರು ಭೇಟಿ ನೀಡಿದ ಕಡೆಗಳಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಸಂಭವಿಸಿದ ರಸ್ತೆ ಹಾನಿ, ಕಸದ ರಾಶಿ, ತ್ಯಾಜ್ಯ ವಿಲೇವಾರಿ ಇತ್ಯಾದಿ ಪೊಲೀಸ್ ಇಲಾಖೆಗೆ ನೇರವಾಗಿ ಸಂಬಂಧಪಡದ ವಿಚಾರಗಳ ಬಗ್ಗೆ ನಾಗರಿಕರಿಂದ ದೂರು ವ್ಯಕ್ತಗೊಂಡಿತು.
ಈ ಬಗ್ಗೆ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಯ ಗಮನಕ್ಕೆ ತಂದು ಸಮಸ್ಯೆ ನಿವಾರಿಸುವ ಭರವಸೆ ದೊರೆಯಿತು. ಆದರೆ ಸಂಚಾರ ಹಾಗೂ ಕಾನೂನು, ಸುವ್ಯವಸ್ಥೆ ಅಥವಾ ಪೊಲೀಸ್ ಇಲಾಖೆಯ ಬಗ್ಗೆ ಯಾವುದೇ ನೇರ ದೂರು ವ್ಯಕ್ತಗೊಂಡಿಲ್ಲ ಎಂದು ಕಮಿಷನರ್ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.
ಆಯುಕ್ತರ ಬೀಟ್ಗೆ ಶ್ಲಾಘನೆ
‘ನನ್ನ ಬೀಟ್-ನನ್ನ ಹೆಮ್ಮೆ’ ಹೊಸ ಬೀಟ್ ವ್ಯವಸ್ಥೆಗೆ ಚಾಲನೆ ನೀಡಿದ ದಿನವೇ ಸ್ವತಃ ಪೊಲೀಸ್ ಆಯುಕ್ತರು ಪೊಲೀಸ್ ಸಿಬ್ಬಂದಿ ಜೊತೆಗೆ ಬೀಟ್ ನಡೆಸಿರುವುದು ನಾಗರಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಕಂಡತ್ಪಳ್ಳಿಯಿಂದ ಮಿಷನ್ ಕಂಪೌಂಡ್ ವರೆಗೆ ಬೀಟ್ ನಡೆಸಿದ ಆಯುಕ್ತ ಡಾ.ಪಿ.ಎಸ್.ಹರ್ಷ ಅವರು, ನಾಗರಿಕರಲ್ಲಿ ಪೊಲೀಸ್ ಇಲಾಖೆ ಬಗ್ಗೆ ಮನವರಿಕೆ ಮಾಡುವ ಹಾಗೂ ಧೈರ್ಯ ತುಂಬುವ ಕೆಲಸ ಮಾಡಿದರು.
ಯಾವುದೇ ಕುಂದು ಕೊರತೆ ಇದ್ದರೆ ನೇರವಾಗಿ ಬೀಟ್ ಪೊಲೀಸ್ ಸಿಬ್ಬಂದಿಯ ಮೊಬೈಲ್ಗೆ ಎಸ್ಎಂಎಸ್ ಅಥವಾ ವಾಟ್ಸ್ಆ್ಯಪ್ ಸಂದೇಶ ಕಳುಹಿಸಬಹುದು. ಇಲ್ಲವೇ ಕರೆ ಮಾಡಿ ತಿಳಿಸಬಹುದು. ನಿಮ್ಮ ಪ್ರದೇಶಕ್ಕೆ ಬೀಟ್ ಸಿಬ್ಬಂದಿಯೇ ಅಧಿಕಾರಿ ಇದ್ದಂತೆ ಎಂದು ಮನವರಿಕೆ ಮಾಡಿದರು.
ಈ ಸಂದರ್ಭ ಹಿರಿಯ ನಾಗರಿಕರ ಭದ್ರತೆಗೆ ಭರವಸೆ ನೀಡಿದ ಪೊಲೀಸ್ ಆಯುಕ್ತರು ರಾತ್ರಿ ಬೀಟ್ನಲ್ಲಿ ವಿಶೇಷ ನಿಗಾ ಇರಿಸಲಾಗುವುದು ಎಂದರು. ಈ ಹೊಸ ಬೀಟ್ ವ್ಯವಸ್ಥೆ ಪೊಲೀಸ್ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ನಾಗರಿಕರ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ. ಇದು ಬಹಳ ಪರಿಣಾಮಕಾರಿಯಾಗಿದ್ದು, ನಾಗರಿಕರ ಜೊತೆಗೆ ಪೊಲೀಸ್ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆಯುವ ವಿಶ್ವಾಸ ವ್ಯಕ್ತಪಡಿಸಿದರು.