ವಾರಕ್ಕೊಮ್ಮೆ ಸಂತ್ರಸ್ತರ ಅಹವಾಲು ಸ್ವೀಕಾರ: ದ.ಕ. ಜಿಲ್ಲಾಧಿಕಾರಿ
ಪಚ್ಚನಾಡಿ-ಮಂದಾರ ತ್ಯಾಜ್ಯ ಸಮಸ್ಯೆ ಕುರಿತು ಸಾರ್ವಜನಿಕರ ಸಭೆ
ಮಂಗಳೂರು, ಆ.17: ಪಚ್ಚನಾಡಿ ಡಂಪಿಂಗ್ ಯಾರ್ಡ್ನಿಂದ ತ್ಯಾಜ್ಯ ಪ್ರವಾಹ ಹರಿದು ಸಂತ್ರಸ್ತರಾದ ಮಂದಾರ ನಿವಾಸಿಗಳ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ವಾರಕ್ಕೊಂದು ಬಾರಿ ಸಂತ್ರಸ್ತರನ್ನು ಭೇಟಿಯಾಗಿ ಅಹವಾಲು ಆಲಿಸುವುದಾಗಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸಂತ್ರಸ್ತರಿಗೆ ಭರವಸೆ ನೀಡಿದ್ದಾರೆ.
ನಗರದ ಬೈತುರ್ಲಿ ಬಳಿ ಇರುವ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ವಸತಿ ಸಂಕೀರ್ಣದಲ್ಲಿ ತಾತ್ಕಾಲಿಕ ಬದುಕು ಕಂಡುಕೊಂಡಿರುವ ಸಂತ್ರಸ್ತ ಕುಟುಂಬಗಳನ್ನು ಶನಿವಾರ ಭೇಟಿಯಾದ ಜಿಲ್ಲಾಧಿಕಾರಿ ಮಾತನಾಡಿದರು.
ಪಚ್ಚನಾಡಿ ತ್ಯಾಜ್ಯ ತೆರವಿನ ಕುರಿತು ತಜ್ಞರ ಅಭಿಪ್ರಾಯ ಕೇಳಲಾಗಿದೆ. ಚೆನ್ನೈನಿಂದ ತಜ್ಞರ ತಂಡ ಈಗಾಗಲೇ ಭೇಟಿ ನೀಡಿದೆ. ಇಂದೋರ್ನಿಂದ ಇನ್ನೊಂದು ತಜ್ಞರ ತಂಡ ಸದ್ಯದಲ್ಲೇ ಭೇಟಿ ನೀಡಲಿದೆ. ಎನ್ಐಟಿಕೆ ತಜ್ಞರು ಕೂಡ ವರದಿ ನೀಡಲಿದ್ದಾರೆ. ಈ ಎಲ್ಲ ವರದಿಯ ಹಿನ್ನೆಲೆಯಲ್ಲಿ ತ್ಯಾಜ್ಯ ತೆರವಿನ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಹಾಗೂ ಉಪ ಆಯುಕ್ತೆ ಗಾಯತ್ರಿ ನಾಯಕ್ ಉಪಸ್ಥಿತರಿದ್ದರು.