ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಗುರುತಿನ ಚೀಟಿ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಪಿಂಚನಿ ಯೋಜನೆ ಪಡೆದುಕೊಳ್ಳಿ: ಗಣಪತಿ ಹೆಗ್ಡೆ
ಪುತ್ತೂರು: ರಾಷ್ಟ್ರದ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಪಿಂಚನಿ ಯೋಜನೆಯು ಜಾರಿಗೆ ಬಂದಿದ್ದು 18ರಿಂದ 40 ವರ್ಷದೊಳಗಿನ ಎಲ್ಲಾ ವಿಧದ ಕಾರ್ಮಿಕರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗ್ಡೆ ಹೇಳಿದರು.
ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯಶನ್ನ ವತಿಯಿಂದ ಭಾನುವಾರ ನಗರದ ದರ್ಬೆ ಸಣ್ಣ ಕೈಗಾರಿಕಾ ಅಭಿವೃದ್ಧಿ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆದ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಗುರುತಿನ ಚೀಟಿ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಗುರುತಿನ ಚೀಟಿ ವಿತರಿಸಿ ಅವರು ಮಾತನಾಡಿದರು.
2018ರಿಂದ ಜಾರಿಗೆ ಬಂದಿರುವ ಈ ಯೋಜನೆಯಲ್ಲಿ 18ರಿಂದ 40 ವ ರ್ಷದೊಳಗಿನ ಯಾವುದೇ ಕಾರ್ಮಿಕರು ಈ ಯೋಜನೆ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಯೋಜನೆಯಿಂದ ಕಾರ್ಮಿಕರಿಗೆ 60 ವರ್ಷದ ಪೂರೈಸಿದ ಬಳಿ ಪ್ರತಿ ತಿಂಗಳು ರೂ.3000 ಪಿಂಚನಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಈ ಯೋಜನೆಗೆ ಸೇರ್ಪಡೆಗೆ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕ ಪ್ರತಿಗಳನ್ನು ನೀಡಿ ನೋಂದಾಯಿಸಿಕೊಳ್ಳಬೇಕು. 18 ವರ್ಷ ತುಂಬಿದವರು ರೂ.55 ಹಾಗೂ 40 ವರ್ಷ ತುಂಬಿದವರು ರೂ.200ನ್ನು ಪಾವತಿಸಬೇಕು. ಫಲಾನುಭವಿಗಳು ಪಾವತಿಸುವ ಶುಲ್ಕದಷ್ಟೇ ಸಮಾನ ಮೊತ್ತವನ್ನು ಕೇಂದ್ರ ಸರಕಾರ ಪಾವತಿಸಲಿದೆ. ನೋಂದಾಯಿಸುವ ಸಂದರ್ಭದಲ್ಲಿ ನಗದು ಪಾವತಿಸಿ ನಂತರ ಪ್ರತಿ ತಿಂಗಳು ಬ್ಯಾಂಕ್ ಖಾತೆಯಿಂದ ವರ್ಗಾವಣೆಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ ಮಾತನಾಡಿ, ನಮ್ಮ ಸಂಘಟನೆಯಲ್ಲಿ ರಾಜ್ಯದಲ್ಲಿ ಸುಮಾರು 4ಲಕ್ಷ ಟೈಲರ್ ವೃತ್ತಿ ಬಾಂಧವರನ್ನು ಹೊಂದಿರುವ ಸಂಘಟನೆಯಾಗಿದೆ. ರಾಜ್ಯದಲ್ಲಿ ಪ್ರಮುಖ ಸಂಘನೆಯಾಗಿ ರೈತ ಸಂಘವಿದ್ದರೆ ಎರಡನೇ ಸ್ಥಾನದಲ್ಲಿ ಟೈಲರ್ಸ್ ಎಸೋಸಿಯೇಶನ್ ಪ್ರಬಲ ಸಂಘಟನೆಯಾಗಿದೆ ಎಂದರು.
ಕ್ಷೇತ್ರ ಸಮಿತಿ ಅಧ್ಯಕ್ಷ ಜಯರಾಮ ಬಿ.ಎನ್ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಜಾನ್ ಫೆರ್ನಾಂಡೀಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಗುರುತಿನ ಚೀಟಿಯನ್ನು ವಲಯದ ಅಧ್ಯಕ್ಷರುಗಳಿಗೆ ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು. ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಉಮಾ ಯು.ನಾಯ್ಕ್ ಸ್ವಾಗತಿಸಿದರು. ರಾಜ್ಯ ಸಮಿತಿ ನಿಕಟಪೂರ್ವ ಕೋಶಾಧಿಕಾರಿ ಬಿ.ರಘುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತೇಜಸ್ ಹಾಗೂ ಶಂಭು ಬಲ್ಯಾಯ ಕಾರ್ಯಕ್ರಮ ನಿರೂಪಿಸಿದರು