ನೆರೆ ಪೀಡಿತ ಪ್ರದೇಶ ನಿವಾಸಿಗಳಿಗೆ ಬ್ಯಾರಿ ನಿಖಾಃ ಹೆಲ್ಪ್ ಲೈನ್ ನಿಂದ ನೆರವು
ಮಂಗಳೂರು: ಅತಿವೃಷ್ಟಿ, ಭೂಕುಸಿತದ ಕಾರಣದಿಂದಾಗಿ ನಿರಾಶ್ರಿತರಾದ ನೆರೆ ಪೀಡಿತ ಪ್ರದೇಶದ ಜನರಿಗೆ ಮೂಲ ಸೌಕರ್ಯಗಳನ್ನೊದಗಿಸುವ ಸಲುವಾಗಿ ಬ್ಯಾರಿ ನಿಖಾಃ ಹೆಲ್ಪ್ ಲೈನ್ ಸಂಘಟನೆಯು ದಾನಿಗಳಿಂದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿತು.
ಬಟ್ಟೆ ಬರೆ, ಆಹಾರ ಸಾಮಾಗ್ರಿ ಹಾಗೂ ದಿನಬಳಕೆಯ ಇನ್ನಿತರ ಸಾಮಾಗ್ರಿಗಳನ್ನೊಳಗೊಂಡ 14 ಬಾಕ್ಸ್ ಗಳನ್ನು ಉತ್ತರ ಕರ್ನಾಟಕಕ್ಕೆ ವಿತರಿಸಲು ‘ಬಿಗ್ ಎಫ್ಎಂ’ ತಂಡಕ್ಕೆ ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ಬ್ಯಾರಿ ನಿಖಾಃ ಹೆಲ್ಪ್ ಲೈನ್ ಶಿರ್ವ (ಉಡುಪಿ) ಘಟಕದ ಪದಾಧಿಕಾರಿ ಅಶ್ರಫ್, ಇಸ್ಮಾಯಿಲ್, ಸಿದ್ದೀಖ್ , ನೌಫಲ್, ಸಫ್ವಾನ್ ಹಾಗೂ ಶುಹೈಬ್ ಉಪಸ್ಥಿತಿಯಿದ್ದರು.
ಬೆಳ್ತಂಗಡಿ, ಕಾಜೂರು ಭಾಗಕ್ಕೆ 4 ಬಾಕ್ಸ್ ಸಾಮಾಗ್ರಿಗಳನ್ನು ಬ್ಯಾರಿ ನಿಖಾಃ ಹೆಲ್ಪ್ ಲೈನ್ ಬೆಳ್ತಂಗಡಿ ಘಟಕದ ಪದಾಧಿಕಾರಿ ಜಲೀಲ್ ಮತ್ತು ತಂಡದ ನೇತೃತ್ವದಲ್ಲಿ ವಿತರಿಸಲಾಯಿತು.
ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಸಹಕರಿಸಿದ ಎಲ್ಲಾ ದಾನಿಗಳಿಗೂ ಕೃತಜ್ಞತೆಯನ್ನು ಸಲ್ಲಿಸಿದ ಬ್ಯಾರಿ ನಿಖಾಃ ಹೆಲ್ಪ್ ಲೈನ್ ಸ್ಥಾಪಕರಾದ ರಾಶ್ ಬ್ಯಾರಿ, ಪ್ರಕೃತಿ ವಿಕೋಪಕ್ಕೊಳಗಾದ ನಿವಾಸಿಗಳ ಬದುಕನ್ನು ಕಟ್ಟಿಕೊಡಲು ಪ್ರತಿಯೋರ್ವರೂ ಶ್ರಮಿಸಬೇಕಾಗಿ ವಿನಂತಿಸಿದರು.