ಕಟ್ಟಡ ಕಾರ್ಮಿಕರಿಂದ ಅಂಚೆ ಕಾರ್ಡ್ ಚಳವಳಿಗೆ ಚಾಲನೆ
ಕುಂದಾಪುರ, ಆ.18: ಕೇಂದ್ರ ಸರಕಾರವು ಉದ್ದೇಶಿತ ಸಾಮಾಜಿಕ ಸುರಕ್ಷತ ಮಸೂದೆ-2018 ವಾಪಾಸ್ಸು ಪಡೆಯಲು ಆಗ್ರಹಿಸಿ ಹಾಗೂ ಕಟ್ಟಡ ಕಾರ್ಮಿಕರ ಕಾನೂನು ಉಳಿಸಲು ಒತ್ತಾಯಿಸಿ ಪ್ರಧಾನಮಂತ್ರಿ ಹಾಗೂ ರಾಜ್ಯದ ಮುಖ್ಯ ಮಂತ್ರಿಗಳಿಗೆ ಕಟ್ಟಡ ಕಾರ್ಮಿಕ ಕುಟುಂಬಗಳು ದೇಶವ್ಯಾಪಿ ನಡೆಸುತ್ತಿರುವ ಅಂಚೆ ಕಾರ್ಡ್ ಚಳವಳಿಗೆ ಇಂದು ಹೆಮ್ಮಾಡಿ ಆದರ್ಶ ಯುವಕ ಮಂಡಲದಲ್ಲಿ ಚಾಲನೆ ನೀಡಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಕಾರ್ಮಿಕ ಕಾನೂನು ಸುಧಾರಣೆಯ ಹೆಸರಿನಲ್ಲಿ ಕಟ್ಟಡ ಕಾರ್ಮಿಕರ ಕಾನೂನು ತಿದ್ದುಪಡಿ ಮಾಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ಕಟ್ಟಡ ಕಾರ್ಮಿಕರು ತೀವ್ರ ಹೋರಾಟ ನಡೆಸಬೇಕಾಗಿದೆ. ಒಂದೆಡೆ ಮರಳು ಸಮಸ್ಯೆ ಯಿಂದ ಕೆಲಸವಿಲ್ಲದೇ ಆದಾಯವೂ ಇಲ್ಲ. ಇನ್ನೊಂದೆಡೆ ಕಾರ್ಮಿಕ ಕಾನೂನು ಮೂಲಕ ಪಡೆಯುತ್ತಿರುವ 12 ಸೌಲಭ್ಯಗಳನ್ನು ಕಸಿಯುತ್ತಿರುವುದು ಅಮಾ ನವೀಯವಾಗಿದೆ ಎಂದು ದೂರಿದರು.
ಸಭೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ತಾಲೂಕು ಕೋಶಾಧಿಕಾರಿ ಜಗದೀಶ್ ಆಚಾರ್, ಉಪಾಧ್ಯಕ್ಷ ಸಂತೋಷ ಹೆಮ್ಮಾಡಿ, ಹೆಮ್ಮಾಡಿ ಘಟಕದ ನರಸಿಂಹ ದೇವಾಡಿಗ, ವಾಸು ದೇವಾಡಿಗ, ಕಟ್ಬೇಲ್ತೂರು ಘಟಕದ ಶ್ರೀಧರ ಗಾಣಿಗ, ಶಂಕರ್ ಆಚಾರ್ ಉಪಸ್ಥಿತರಿ ದ್ದರು. ಈ ಚಳವಳಿ ಸೆ.10ವರೆಗೆ ದೇಶವ್ಯಾಪಿ ನಡೆಯಲಿದೆ.