ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟ: ಎಸ್ಡಿಪಿಐ
ಉಪ್ಪಿನಂಗಡಿ: ಇಲ್ಲಿನ ಪೆರಿಯಡ್ಕದಲ್ಲಿ ಗುಡ್ಡದ ಮೇಲೆ ಅಪಾಯದ ಸ್ಥಿತಿಯಲ್ಲಿರುವ ಮನೆಗಳನ್ನು ಎಸ್ಡಿಪಿಐ ನಿಯೋಗ ತೆರಳಿ ಪರಿಶೀಲನೆ ನಡೆಸಿದ್ದು, ಕೂಡಲೇ ಇಲ್ಲಿನವರಿಗೆ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದೆ.
ಮನೆಗಳ ವೀಕ್ಷಣೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಎಸ್ಡಿಪಿಐ ವಲಯಾಧ್ಯಕ್ಷ ಸೀಮಾ ರಝಾಕ್, ಇಲ್ಲಿ ಗುಡ್ಡದ ಕೆಳಗೆ ಜಾಗವಿರುವವರು ತಮ್ಮ ಜಾಗಗಳನ್ನು ಸಮತಟ್ಟುಗೊಳಿಸಿದ್ದು, ಇದರಿಂದ ಧರೆ ಕುಸಿದು ಅನಾಹುತಕ್ಕೆ ಕಾರಣವಾಗಿದೆ. ಈ ಗುಡ್ಡದಲ್ಲಿ ಹತ್ತಿಪ್ಪತ್ತು ಮನೆಗಳಿದ್ದು, ಅದರಲ್ಲಿ ಮೂರು ಮನೆಗಳು ಧರೆಯಂಚಿನಲ್ಲಿದ್ದು, ಧರೆ ಕುಸಿತದಿಂದ ಈಗಾಗಲೇ ಬಿರುಕು ಬಿಟ್ಟಿದ್ದು, ಇವುಗಳು ಧರೆಯೊಂದಿಗೆ ಕುಸಿದು ಬೀಳುವ ಸಾಧ್ಯತೆಯಿದ್ದು, ತೀರಾ ಅಪಾಯದಂಚಿನಲ್ಲಿವೆ. ಈ ಬಗ್ಗೆ ಮನೆಯವರು ಸ್ಥಳೀಯಾಡಳಿತ, ಶಾಸಕರಲ್ಲಿ ದೂರಿಕೊಂಡರೂ ಅವರು ಬಂದು ಸ್ಥಳ ಪರಿಶೀಲನೆ ಮಾಡಿದರೆ ಹೊರತು ಬೇರಾವ ಕ್ರಮವೂ ಕೈಗೊಂಡಿಲ್ಲ. ಆದ್ದರಿಂದ ಅನಾಹುತ ಸಂಭವಿಸುವ ಮೊದಲು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು. ಈ ಬಗ್ಗೆ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಭೇಟಿ ನೀಡಿದ ನಿಯೋಗದಲ್ಲಿ ಎಸ್ಡಿಪಿಐಯ ಇಕ್ಬಾಲ್ ಕೆಂಪಿ, ಅಬ್ದುಲ್ಲಾ ಆದರ್ಶನಗರ, ಮುಸ್ತಾಫ ಲತೀಫಿ, ಮುಸ್ತಾಫ ಪೆರ್ನೆ, ರಶೀದ್ ಕೊಡಿಪ್ಪಾಡಿ ಮತ್ತಿತರರಿದ್ದರು.