ಮಂಗಳೂರು: ವಿಚಾರಣಾಧೀನ ಕೈದಿ ಸಾವು
ಮಂಗಳೂರು, ಆ. 20: ದ.ಕ. ಜಿಲ್ಲಾ ಉಪಕಾರಾಗೃಹಕ್ಕೆ ಸೋಮವಾರ ತಡರಾತ್ರಿ ಸೇರಿದ್ದ ವಿಚಾರಣಾಧೀನ ಕೈದಿ ಬೆಳ್ತಂಗಡಿಯ ಎಚ್.ಎಂ. ರಾಜು (24) ಮಂಗಳವಾರ ಮಧ್ಯಾಹ್ನ ಅಸೌಖ್ಯಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ವಾರಂಟ್ ಮೇಲೆ ಬಂಧಿಸಲಾಗಿತ್ತು. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿತ್ತು. ಎಲ್ಲ ಪ್ರಕ್ರಿಯೆ ಮುಗಿಯುವಾಗ ಮಂಗಳವಾರ ಬೆಳಗ್ಗಿನ ಜಾವ 3:30 ಆಗಿತ್ತು.
ಬೆಳಗ್ಗೆ ಕಾರಾಗೃಹದಲ್ಲಿ ಆಹಾರ ಸೇವಿಸಿದ್ದು, ಆ ಬಳಿಕ ಹುಷಾರಿಲ್ಲ ಎಂದು ಸಹ ಕೈದಿಗಳೊಂದಿಗೆ ಹೇಳಿಕೊಂಡಿದ್ದು, ಮಧ್ಯಾಹ್ನದ ವೇಳೆಗೆ ತೀವ್ರ ಅಸೌಖ್ಯಕ್ಕೀಡಾಗಿ ಕುಸಿದು ಬಿದ್ದಿದ್ದು ನಂತರ ಆತನನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿರುವುದು ದೃಢಪಟ್ಟಿದೆ.
ಈ ಬಗ್ಗೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story