ಕಂಟೈನರ್ ಟ್ರಕ್ ಢಿಕ್ಕಿ ಪ್ರಕರಣ: ಆರೋಪಿ ಖುಲಾಸೆ
ಮಂಗಳೂರು, ಆ.21: ಬೈಕಂಪಾಡಿ ಸೇತುವೆ ಸಮೀಪ ಕಂಟೈನರ್ ಟ್ರಕ್ ಢಿಕ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತಾಗದ ಕಾರಣ ಮಂಗಳೂರಿನ ಜೆಎಂಎ್ಸಿ 2ನೇ ನ್ಯಾಯಾಲಯವು ಆರೋಪಿ ರಾಜೇಶ್ನನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಬೈಕಂಪಾಡಿ ಮೀನಕಳಿಯ ನಿವಾಸಿ, ಟ್ಯಾಂಕರ್ ಚಾಲಕ ರಾಜೇಶ್ (35) ಖುಲಾಸೆಗೊಂಡವರು.
ಪ್ರಕರಣ ವಿವರ: 2018ರ ಜುಲೈ 25ರಂದು ಮಧ್ಯಾಹ್ನ ಹಮೀದ್ ಎಂಬವರು ಕುಳಾಯಿ ಕಡೆಯಿಂದ ಪಣಂಬೂರು ಕಡೆಗೆ ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಿದ್ದು, ಬೈಕಂಪಾಡಿ ಸೇತುವೆ ಮೇಲೆ ತಲುಪಿದರು. ಈ ವೇಳೆ ಹಿಂಬದಿಯಿಂದ ಅತಿ ವೇಗವಾಗಿ ಆಗಮಿಸಿದ ಕಂಟೈನರ್ ಟ್ರಕ್ ಸ್ಕೂಟರಿಗೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಸ್ಕೂಟರ್ ಸವಾರ ಹಮೀದ್ ರಸ್ತೆಗೆ ಬಿದ್ದು ತೀವ್ರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದ್ದರು ಎಂದು ಆರೋಪಿಸಲಾಗಿತ್ತು.
ಆದರೆ ಆರೋಪ ಸಾಬೀತಾಗದ ಕಾರಣ ಮತ್ತು ಸಾಕ್ಷಾಧಾರದ ಕೊರತೆಯಿಂದ ನ್ಯಾಯಾಲಯವು ಆರೋಪಿ ಚಾಲಕನನ್ನು ದೋಷ ಮುಕ್ತಗೊಳಿಸಿ ಬಿಡುಗಡೆಗೊಳಿಸಿದೆ. ಆರೋಪಿಯ ಪರವಾಗಿ ನ್ಯಾಯವಾದಿ ಶಶಿರಾಜ್ ರಾವ್ ಕಾವೂರು ವಾದಿಸಿದ್ದರು.