ಆ.23-25: ಎನ್ಐಟಿಕೆಯಲ್ಲಿ ವಿಚಾರ ಸಂಕಿರಣ
ಮಂಗಳೂರು, ಆ.22: ಎನ್ಐಟಿಕೆ ಕೆಮಿಕಲ್ ಇಂಜಿನಿಯರಿಂಗ್ ವಿಭಾಗವು ವಿದ್ಯಾಸಂಸ್ಥೆಯ ವಜ್ರ ಮಹೋತ್ಸವದ ಅಂಗವಾಗಿ ‘ಪರಿಸರ ಮಾಲಿನ್ಯ ತಡೆಗಟ್ಟುವಿಕೆ ಹಾಗೂ ನಿಯಂತ್ರಣ: ಭವಿಷ್ಯದ ದೃಷ್ಟಿಕೋನ’ ಎಂಬ ವಿಷಯದ ಬಗ್ಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗ ದೊಂದಿಗೆ ಆ.23ರಿಂದ 25ರವರೆಗೆ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
ಆ.23ರಂದು ಬೆಳಗ್ಗೆ 9ಗಂಟೆಗೆ ಸುರತ್ಕಲ್ನ ಎನ್ಐಟಿಕೆ ಆವರಣದ ಪಶ್ಚಿಮ ಪರಿಸರದಲ್ಲಿರುವ ಎಲ್ಎಚ್ಸಿ-ಸಿ ಸೆಮಿನಾರ್ ಹಾಲ್ನಲ್ಲಿ ವಿಚಾರ ಸಂಕಿರಣ ಉದ್ಘಾಟನೆಗೊಳ್ಳಲಿದೆ. ವಿಚಾರ ಸಂಕಿರಣದಲ್ಲಿ 250 ಕ್ಕೂಅಧಿಕ ಶೈಕ್ಷಣಿಕ, ಕೈಗಾರಿಕೋದ್ಯಮ, ಸಂಶೋಧನಾ, ಸರಕಾರಿ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುವರು. ತಜ್ಞರಿಂದ ದಿಕ್ಸೂಚಿ ಉಪನ್ಯಾಸಗಳು, ತಾಂತ್ರಿಕ ಪ್ರಬಂಧ ಮಂಡನೆ, ’ಪರಿಸರದ ಸವಾಲುಗಳಿಗಾಗಿ ಸುಸ್ಥಿರ ಪರಿಹಾರಗಳು’ ಎಂಬ ವಿಷಯದ ಬಗ್ಗೆ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಸೃಜನಾತ್ಮಕ ವಿಚಾರಗಳ ಪ್ರಬಂಧ ಮಂಡನೆ, ಶಾಲಾ ಮಕ್ಕಳಿಗಾಗಿ ‘ವೆಲ್ತ್ ಫ್ರಮ್ ವೇಸ್ಟ್’ ಎಂಬ ವಿಷಯದ ಬಗ್ಗೆ ಮಾದರಿ/ಪೋಸ್ಟರ್ಗಳ ಪ್ರದರ್ಶನ, ಕೈಗಾರಿಕಾ ವಸ್ತು ಪ್ರದರ್ಶನ ನಡೆಯಲಿದೆ. ಆ.25ರಂದು ಮಧ್ಯಾಹ್ನ ವಿಚಾರ ಸಂಕಿರಣದ ಸಮಾರೋಪ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.