ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಸಂಸ್ಕೃತೋತ್ಸವ ಕಾರ್ಯಕ್ರಮ
ಮಂಗಳೂರು, ಆ.22: ಸಂಸ್ಕೃತವು ಸಹಜವಾಗಿ ಪಕ್ವಯುತ ಹಾಗೂ ಶ್ರೇಷ್ಠವಾದ ಭಾಷೆಯಾಗಿದ್ದು, ಭಾರತೀಯ ಭಾಷೆಗಳಿಗೆಲ್ಲಾ ಮೂಲಾಧಾರವಾಗಿ ತನ್ನ ಇರುವಿಕೆಯನ್ನು ಕಾಪಾಡಿಕೊಂಡಿದೆ. ಇದರಲ್ಲಿನ ಪದ್ಯರೂಪದ ಸಾಹಿತ್ಯವು ಕಂಠಪಾಠಕ್ಕೆ ಪೂರಕವಾಗಿದೆ. ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರ್ಣ ಸಹಕಾರಿ ಆಗಿದೆ ಎಂದು ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರೊ. ಜನಾರ್ದನ ತಾಮ್ಹನ್ಕರ್ ಅಭಿಪ್ರಾಯಪಟ್ಟರು.
ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಗುರುವಾರ ನಡೆದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಾದ ಸಲೋನಿ ಹಾಗೂ ಮೆಹಫೂಸ್ ಸಂಸ್ಕೃತ ಭಾಷೆಯ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಸಂಸ್ಕೃತ ಶಿಕ್ಷಕ ಶ್ರೀನಿಧಿ ಎ.ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರಿ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ.ನಾಕ್ ಅಧ್ಯಕ್ಷತೆ ವಹಿಸಿದ್ದರು. ಶಕ್ತಿ ಎಜುಕೇಶನ್ ಟ್ರಸ್ಟ್ನ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ಯ, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ನಸೀಂ ಬಾನು, ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ಶಾಲಾ ಪ್ರಾಚಾರ್ಯೆ ವಿದ್ಯಾ ಜಿ. ಕಾಮತ್, ಪಿ.ಯು ಕಾಲೇಜಿನ ಪ್ರಾಚಾರ್ಯ ಪ್ರಭಾಕರ ಜಿ.ಎಸ್ ಉಪಸ್ಥಿತರಿದ್ದರು.