ಕಾಪು ಸಮಗ್ರ ಅಭಿವೃದ್ಧಿಗೆ ಲಾಲಾಜಿ ಮೆಂಡನ್ ಮನವಿ
ಕಾಪು: ಕಾಪು ಪುರಸಭೆ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿವಿಧ ಬೇಡಿಕೆಗಳ ಬಗ್ಗೆ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಅವರು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪರವರ ಗೃಹ ಕಚೇರಿಯಲ್ಲಿ ಗುರುವಾರ ಭೇಟಿಯಾಗಿ ಮನವಿ ಸಲ್ಲಿಸಿದರು.
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಪು ತಾಲ್ಲೂಕು ಪಂಚಾಯಿತಿಯ ಎಲ್ಲಾ 32 ಇಲಾಖೆಗಳ ವರ್ಗಾವಣೆ ಬಗ್ಗೆ ಹಾಗೂ ಕಾಪುಗೆ ನೂತನ ಮಿನಿ ವಿಧಾನಸೌಧ ಹಾಗೂ ಪ್ರವಾಸಿ ಮಂದಿರ ನಿರ್ಮಾಣ, ಕಾಪು ಪ್ರಾಥಮಿಕ ಅರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಬೇಕು. ಹೆಜಮಾಡಿ ಬಂದರುಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪ್ರಾರಂಭಿಸುವುದು, ಕಾಪು ಘನ ತ್ಯಾಜ ಘಟಕದ ಬಗ್ಗೆ ಸೂಕ್ತವಾದ ಕ್ರಮ ಕೈಗೊಳ್ಳುವುದು, ಕಾಪು ಪೇಟೆಯ ವ್ಯವಸ್ಥಿತವಾದ ಒಳ ಚರಂಡಿ ವ್ಯವಸ್ಥೆ, ಪ್ರಕೃತಿ ವಿಕೋಪಕ್ಕೆ ಹಾನಿಗೊಳಗಾದ ರಸ್ತೆ ಅಭಿವೃದ್ಧಿ ಪಡಿಸುವುದು, ಅಲ್ಲದೆ ಕಾಪು ಬೀಚ್ನಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಹಾಗೂ ವಿವಿಧ ಕಾಮಗಾರಿಗಳ ಮತ್ತು ಹೆಚ್ಚಿನ ಅನುದಾನ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದರು.
ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಬಿ. ಎಸ್ ಯಡಿಯೂರಪ್ಪನವರು ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.