ಉಡುಪಿ: ಗಮನ ಸೆಳೆದ ಅಲಾರೆ ತಂಡದ ದಹಿಹಂಡಿ
ಉಡುಪಿ, ಆ.24: ಪರ್ಯಾಯ ಪಲಿಮಾರು ಮಠ ಹಾಗೂ ಶ್ರೀಕನಕ ಸಾಂಸ್ಕೃತಿಕ ವೇದಿಕೆ ಸಹಯೋಗದೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇಂದು ಉಡುಪಿ ನಗರ ವಿವಿಧೆಡೆಗಳಲ್ಲಿ ಹಮ್ಮಿಕೊಳ್ಳಲಾದ ಅಲಾರೆ ತಂಡದ ದಹಿಹಂಡಿ ಜನರ ಗಮನ ಸೆಳೆಯಿತು.
ಕಾರ್ಯಕ್ರಮಕ್ಕೆ ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಮಠದ ವಸಂತಮಂಟಪದಲ್ಲಿ ಬೆಳಗ್ಗೆ ಚಾಲನೆ ನೀಡಿದರು. ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ದರು.
ಉದ್ಯಮಿಗಳಾದ ಕೆ.ರಂಜನ್ ಕಲ್ಕೂರು, ಭುವನೇಂದ್ರ ಕಿದಿಯೂರು, ಹರಿಯಪ್ಪ ಕೋಟ್ಯಾನ್, ಚಿತ್ರನಟ ಸಚಿನ್ ಸುವರ್ಣ, ಬಾಲಮಿತ್ರ ಮಂಡಳಿ ಸಂತೋಷ್ ಕನಕ ಸಂಸ್ಕೃತಿಕ ವೇದಿಕೆ ಅಧ್ಯಕ್ಷ ರಾಜೇಂದ್ರ ಪೂಜಾರಿ, ದುಬೈ ಪ್ರಕಾಶ ಪೂಜಾರಿ, ಯುವರಾಜ್ ಪಿತ್ರೋಡಿ ಉಪಸ್ಥಿತರಿದ್ದರು.
ಮುಂಬಯಿ ಸಾಂತಾಕ್ರೂಸ್ ಬಾಲಮಿತ್ರ ಮಂಡಳಿಯ 110 ಮಂದಿಯ ಆಲಾರೆ ಗೋವಿಂದ ತಂಡ 50 ಅಡಿ ಎತ್ತರದಲ್ಲಿ ಕಟ್ಟಿ ಇಡಲಾಗಿದ್ದ ಮಡಿಕೆ ಯನ್ನು ಒಡೆದು ಸಾಹಸ ಪ್ರದರ್ಶನ ಮಾಡಿದರು. ಬಳಿಕ ಕನಕ ಮಂಟಪ ಮುಂಭಾಗ, ಕಡಿಯಾಳಿ, ಅಂಬಲಪಾಡಿ ಶ್ಯಾಮಿಲಿ ಸಭಾಂಗಣ, ಲಯನ್ಸ್ ಸರ್ಕಲ್, ತ್ರಿವೇಣಿ ಸರ್ಕಲ್, ಕಾಣಿಯೂರು ಮಠ ಮುಂಭಾಗ, ಪುತ್ತಿಗೆ ಮಠ ಮುಂಭಾಗ, ಪೇಜಾವರ ಮಠ ಮುಂಭಾಗ, ಕಿದಿಯೂರು ಹೋಟೆಲ್ ಎದುರು, ಡಯಾನ ಹೋಟೆಲ್ ಮುಂಭಾಗದಲ್ಲಿ ಮಡಿಕೆ ಒಡೆಯುವ ಆಟ ಆಡಲಾಯಿತು.