ಉಳ್ಳಾಲ ಸೇತುವೆಯಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ
ಮಂಗಳೂರು, ಆ. 25: ನಗರದ ಉಳ್ಳಾಲ ಸೇತುವೆ ಬಳಿ ಬೈಕ್ ಇರಿಸಿ ನಾಪತ್ತೆಯಾಗಿದ್ದ ಕಡಬ ನೂಜಿ ಬಾಳ್ತಿಲ ನಿವಾಸಿ ಸದಾಶಿವ (26) ಎಂಬ ಯುವಕನ ಮೃತದೇಹ ಸಮುದ್ರ ದಡದಿಂದ 12 ಕಿ.ಮೀ. ದೂರದಲ್ಲಿ ರವಿವಾರ ಪತ್ತೆಯಾಗಿದೆ.
ರವಿವಾರ ಕೋಸ್ಟ್ಗಾರ್ಡ್ ಸಿಬ್ಬಂದಿ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಎನ್ಎಂಪಿಟಿ ಬಂದರಿನಿಂದ ಸುಮಾರು 12 ಕಿ.ಮೀ ದೂರ ಸಮುದ್ರದಲ್ಲಿ ಶವವೊಂದು ತೇಲುತ್ತಿತ್ತು. ಕೂಡಲೇ ಪಣಂಬೂರು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಶವವನ್ನು ಪರಿಶೀಲನೆ ನಡೆಸಿದಾಗ ನಾಪತ್ತೆಯಾದ ಸದಾಶಿವ ಎಂಬಾತನೆಂದು ತಿಳಿದುಬಂದಿದೆ.
ಮೃತದೇಹದಲ್ಲಿದ್ದ ರೈನ್ಕೋರ್ಟ್, ಕೈಯಲ್ಲಿ ಹಾಕಿದ್ದ ಕಡಗ ಮತ್ತು ಟ್ಯಾಟೂಗಳು ಸದಾಶಿವ ಅವರದ್ದೇ ಎಂದು ಸಂಬಂಧಿಕರು ಗುರುತು ಹಿಡಿದಿದ್ದಾರೆ. ಮೃತದೇಹವನ್ನು ವೆನ್ಲಾಕ್ಗೆ ಕೊಂಡೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದಾಶಿವ ಅವರು ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ನೀರು ಹಾಕುವ ಕೆಲಸ ನಿರ್ವಹಿಸುತ್ತಿದ್ದರು. ಅ.16ರ ರಾತ್ರಿ 9:30ಕ್ಕೆ ಕೆಲಸ ಮುಗಿಸಿ ಬೈಕ್ನಲ್ಲಿ ಜಪ್ಪಿನಮೊಗರು ಬಳಿ ಇರುವ ಬಾಡಿಗೆ ಮನೆಗೆ ಹೊರಟು ಹೋಗಿದ್ದರು. ಆ ಬಳಿಕ ಮನೆಗೂ ಹೋಗದೆ ರೈಲ್ವೆ ನಿಲ್ದಾಣಕ್ಕೂ ಬಾರದೆ ನಾಪತ್ತೆ ಯಾಗಿದ್ದರು. ಅವರ ಬೈಕ್ ಉಳ್ಳಾಲ ಸೇತುವೆ ಬಳಿ ಪತ್ತೆಯಾಗಿದ್ದು, ಅದರಲ್ಲಿದ್ದ ದಾಖಲೆಯನ್ನು ಪರಿಶೀಲಿಸಿದಾಗ ಸದಾಶಿವ ಅವರ ವಿಳಾಸ ಪತ್ತೆಯಾಗಿತ್ತು.
ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆ ನಾಪತ್ತೆ ಪ್ರಕರಣ ದಾಖಲಾಗಿತ್ತು.