ಗಂಗೊಳ್ಳಿ ಗಣೇಶೋತ್ಸವ ಪೂರ್ವಭಾವಿ ಶಾಂತಿ ಸಭೆ
ಕಾನೂನು ಉಲ್ಲಂಘಿಸಿದಲ್ಲಿ ಮುಲಾಜಿಲ್ಲದೆ ಕ್ರಮ: ಡಿವೈಎಸ್ಪಿ ದಿನೇಶ್
ಗಂಗೊಳ್ಳಿ, ಆ.28: ಗಣೇಶೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಪೂರ್ವ ಭಾವಿಯಾಗಿ ಶಾಂತಿ ಸಭೆಯನ್ನು ಬುಧವಾರ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ನಡೆಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್, ಕಿಡಿಗೇಡಿಗಳನ್ನು ನೀವೇ ಗುರುತಿಸಿ, ಕಾರ್ಯಕ್ರಮದಿಂದ ದೂರ ಇಡಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಇಲ್ಲದಿದ್ದರೆ ಅದೇ ಕಿಡಿಗೇಡಿಗಳಿಂದ ಅಶಾಂತಿ ನಿರ್ಮಾಣವಾಗಿ ಇಡೀ ಊರಿಗೆ ಕೆಟ್ಟ ಹೆಸರು ಬರುತ್ತದೆ ಎಂದರು.
ಸಣ್ಣಪುಟ್ಟ ಘಟನೆಗಳು ಸಹ ದೊಡ್ಡ ರೂಪ ತಾಳುತ್ತವೆ. ಆದುದರಿಂದ ಸಣ್ಣ ಘಟನೆ ಸಂಭವಿಸಿದಾಗಲೇ ಇಲಾಖೆಗೆ ತಿಳಿಸಿ ಸಹಕರಿಸಬೇಕು. ಮೆರವಣಿಗೆ ಯಲ್ಲಿ ಅನ್ಯಧರ್ಮದ ವಿರುದ್ಧ ಹಾಗೂ ಕೋಮುಭಾವನೆ ಕೆರಳಿಸುವ ಘೋಷಣೆ ಕೂಗಬಾರದು. ಮುಂದಾಳತ್ವ ವಹಿಸಿದವರು ಹೆಚ್ಚು ಜಾಗರೂಕರಾಗಿರಬೇಕು. ಕಾನೂನು ಉಲ್ಲಂಘಿಸಿದಲ್ಲಿ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರಗಿಸ ಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ ಗುಣಗ, ಗಂಗೊಳ್ಳಿ ಠಾಣಾಧಿಕಾರಿ ವಾಸಪ್ಪನಾಯ್ಕ್, ಗಂಗೊಳ್ಳಿ ಠಾಣಾ ಎಎಸ್ಸೈಗಳಾದ ರಘು ರಾಮ್, ವೆಂಕಟೇಶ್ ಗೊಲ್ಲ, ಗಣೇಶೋತ್ಸವ ಸಮಿತಿ, ಗಂಗೊಳ್ಳಿ ಜಮಾತುಲ್ ಮುಸ್ಲಿಮೀನ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರಾಜಕೀಯ ನೇತಾರರು ಹಾಜರಿದ್ದರು.