ಉಡುಪಿ: ಭೀಕರ ಅಪಘಾತ: ಪವಾಡಸದೃಶ ಪಾರಾದ ಕಾರು ಚಾಲಕ
ಉಡುಪಿ, ಸೆ.6: ಇಂದು ಮುಂಜಾನೆ ನಗರದ ಕರಾವಳಿ ಬೈಪಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾರದಾ ಹೊಟೇಲ್ ಎದುರು ವೇಗವಾಗಿ ಧಾವಿಸಿ ಬಂದ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕವನ್ನು ದಾಟಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನೆಯಲ್ಲಿ ಕಾರು ಚಾಲಕ ಪವಾಡ ಸದೃಶವಾಗಿ ಪಾರಾಗಿದ್ದಾರೆ.
ಸಂತೆಕಟ್ಟೆಯಿಂದ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಕಾರನ್ನು ಕಲ್ಯಾಣಪುರ ನಿವಾಸಿ ಆನಂದ್ ಪದ್ಮನಾಭನ್ ಎಂಬವರು ಚಲಾಯಿಸುತ್ತಿದ್ದರು.
ಕಾರಿನಲ್ಲಿ ಚಾಲಕ ಮಾತ್ರವಿದ್ದು ಯಾವುದೇ ಗಂಭೀರ ಗಾಯವಾಗಿಲ್ಲ. ಸ್ಥಳೀಯ ಆಟೊ ರಿಕ್ಷಾ ಚಾಲಕರು ಗಾಯಾಳುವನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಢಿಕ್ಕಿಯ ರಭಸಕ್ಕೆ ಕಂಬ ಕಾರನ್ನು ಸೀಳಿರುವುದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ.
ಉಡುಪಿ ಸಂಚಾರ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.