ದ.ಕ. ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅಧಿಕಾರ ಸ್ವೀಕಾರ
ಮಂಗಳೂರು, ಸೆ.7: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸಿಂಧೂ ಬಿ. ರೂಪೇಶ್ ಶನಿವಾರ ಮಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದರು.
ಅಪರ ಜಿಲ್ಲಾಧಿಕಾರಿ ರೂಪಾ ನೂತನ ಜಿಲ್ಲಾಧಿಕಾರಿಯನ್ನು ಸ್ವಾಗತಿಸಿದರು. ಮಂಗಳೂರು ಉಪವಿಭಾಗಾಧಿಕಾರಿ ರವಿಚಂದ್ರ ನಾಯ್ಕ್, ತಹಶೀಲ್ದಾರ್ ಗುರುಪ್ರಸಾದ್ ಉಪಸ್ಥಿತರಿದ್ದರು.
ಸಿಂಧೂ ಅವರು ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಮಹಿಳಾ ಜಿಲ್ಲಾಧಿಕಾರಿ. ಈ ಹಿಂದೆ, 1989ರಲ್ಲಿ ರಂಜನಿ ಶ್ರೀಕುಮಾರ್ ಅವಿಭಜಿತ ದ.ಕ. ಜಿಲ್ಲೆಯ ಪ್ರಥಮ ಮಹಿಳಾ ಜಿಲ್ಲಾಧಿಕಾರಿಯಾಗಿದ್ದರು.
ಸಿಂಧು ಬಿ. ರೂಪೇಶ್ ದ.ಕ. ಜಿಲ್ಲೆಯ 129ನೇ ಜಿಲ್ಲಾಧಿಕಾರಿ. ಇದೇ ಮೊದಲ ಬಾರಿಗೆ ದ.ಕ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳೆರಡೂ ಹುದ್ದೆಗಳಲ್ಲಿ ಮಹಿಳೆಯರಿರುವುದು ವಿಶೇಷ.
ದ.ಕ. ಜಿಲ್ಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನೂತನ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ದ.ಕ. ಜಿಲ್ಲೆ ವೈವಿಧ್ಯದ ಜತೆಗೆ ಸವಾಲುಗಳನ್ನು ಹೊಂದಿದೆ. ಹಾಗಾಗಿ ಇಲ್ಲಿ ಕೆಲಸ ಮಾಡುವ ಬಗ್ಗೆ ಉತ್ಸಾಹವೂ ಇದೆ ಎಂದಿದ್ದಾರೆ. ಜಿಲ್ಲೆಯಲ್ಲಿ ಎರಡನೆ ಮಹಿಳಾ ಜಿಲ್ಲಾಧಿಕಾರಿ ಎಂಬುದು ನನಗೆ ಸಂತಸವಿದೆ. ಆಡಳಿತಾತ್ಮಕವಾಗಿ ಪುರುಷ, ಮಹಿಳೆ ಎಂಬ ಬೇಧವಿಲ್ಲ. ಹಾಗಿದ್ದರೂ, ಹೆಚ್ಚು ಮಹಿಳೆಯರು ಆಡಳಿತ ವ್ಯವಸ್ಥೆಯಲ್ಲಿ ಮುಂದೆ ಬರಬೇಕಾಗಿದೆ. ದ.ಕ. ಜಿಲ್ಲೆ ಬುದ್ಧಿವಂತರ ಜಿಲ್ಲೆ. ಹಾಗಾಗಿ ಜನರಿಂದಲೂ ಸಾಕಷ್ಟು ಅರಿವು ಸಿಗಲಿದೆ. ಅವರ ಸಹಕಾರದಿಂದ ಮುಂದುವರಿಯಲಾಗುವುದು. ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ರೀತಿಯಲ್ಲಿ ಅಭಿವೃದ್ಧಿಗಳಾಗಿವೆ. ಅದರಲ್ಲಿ ನಾವು ಮುಂದುವರಿಯಬೇಕಿದೆ ಎಂದು ನೂತನ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹೇಳಿದ್ದಾರೆ.