ದೋಣಿ ದುರಂತ: ಐವರು ಮೀನುಗಾರರು ಪಾರು
ಮಂಗಳೂರು, ಸೆ.7: ಉಳ್ಳಾಲ ಸಮೀಪ ಮೀನುಗಾರಿಕಾ ದೋಣಿ ಮಗುಚಿದ ಘಟನೆ ಸಂಭವಿಸಿದ್ದು, ಅದರಲ್ಲಿದ್ದ ಎಲ್ಲ ಐದು ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ.
ದೋಣಿಯಲ್ಲಿ ಮಾಲಕ ಕಸ್ಬಾ ಬೆಂಗ್ರೆಯ ಅಬ್ದುಲ್ ರಹ್ಮಾನ್ ಮತ್ತು ಅವರ ಪುತ್ರ ಸ್ವಾನ್, ಅಮೀರ್, ಇಮ್ರಾನ್ ಮತ್ತು ಸಾಯಿದ್ ಅಫ್ರಿದಿ ಅವರಿದ್ದರು.
ಸೆ.4ರಂದು ಸ್ವಾನ್ ದೋಣಿ ಚಲಾಯಿಸುತ್ತಿದ್ದರು. ಅಂದು ಬೆಳಗ್ಗೆ ದೋಣಿ ಮೀನುಗಾರಿಕೆಗೆ ತೆರಳಿದ್ದು, ಮೀನು ಹಿಡಿದು 8 ಗಂಟೆ ವೇಳೆಗೆ ವಾಪಸಾಗುತ್ತಿದ್ದಾಗ ಗಾಳಿ ಮತ್ತು ಅಲೆಗಳ ಅಬ್ಬರದಿಂದ ದೋಣಿ ಮಗುಚಿ ಬಿತ್ತು. ಎಲ್ಲರೂ ಸಮುದ್ರದಲ್ಲಿ ಬಿದ್ದರೂ ಬಳಿಕ ಈಜಿ ದಡ ಸೇರಿದರು. ಅವರೆಲ್ಲರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡರು.
ಇದು ಮರದ ದೋಣಿ ಆಗಿದ್ದು, ಡಬಲ್ ಇಂಜಿನ್ ಹೊಂದಿತ್ತು. ದೋಣಿ ಬಳಿಕ ದಡಕ್ಕೆ ಬಂದು ಅಪ್ಪಳಿಸಿದ್ದು ಬಹಳಷ್ಟು ಹಾನಿಯಾಗಿದೆ ಎಂದು ಮಾಲಕ ಅಬ್ದುಲ್ ರಹಿಮಾನ್ ತಿಳಿಸಿದ್ದಾರೆ.
Next Story