ತಾಂಜಾನಿಯಾದಲ್ಲಿ ಕಾರು ಅಪಘಾತ: ಗಾಯಾಳು ಉಡುಪಿಯ ಉದ್ಯಮಿ ಮೃತ್ಯು
ಉಡುಪಿ, ಸೆ.10: ಆಫ್ರಿಕಾ ಖಂಡದ ತಾಂಜಾನಿಯಾ ದೇಶದ ಬಾಬಟಿ ಬಳಿ ಆ.30ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯ ಗೊಂಡಿದ್ದ ಕುಂಜಿಬೆಟ್ಟು ಪಣಿಯಾಡಿ ಶ್ರವಣ್ ನಾಯಕ್(39) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಸೆ.9ರಂದು ಸಂಜೆ ವೇಳೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇವರ ಸಹೋದರ ಸ್ವೀಕಾರ್ ನಾಯಕ್ ತಾಂಜಾನಿಯಾದಲ್ಲಿ ಉದ್ಯಮ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಶ್ರವಣ್ ನಾಯಕ್ ತನ್ನ ಪತ್ನಿ ಜೊತೆ ಆಗಸ್ಟ್ ತಿಂಗಳಲ್ಲಿ ತಾಂಜಾನಿಯಾಕ್ಕೆ ತೆರಳಿದ್ದರು. ಅಲ್ಲಿ ಕಾರಿನಲ್ಲಿ ತನ್ನ ಪತ್ನಿ ಹಾಗೂ ಸಹೋದರ ಮತ್ತು ಸಹೋದರ ಪತ್ನಿ ಜೊತೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತೆನ್ನಲಾಗಿದೆ.
ಇದರಿಂದ ಶ್ರವಣ್ ನಾಯಕ್ ತೀವ್ರ ಹಾಗೂ ಇತರರು ಸಣ್ಣಪುಟ್ಟ ಗಾಯಗೊಂಡಿದ್ದರು. ಶ್ರವಣ್ಗೆ ಅಲ್ಲಿನ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಭಾರತಕ್ಕೆ ಕರೆದುಕೊಂಡು ಬರಲಾಗಿತ್ತು. ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ತಿಳಿದುಬಂದಿದೆ.
ಉಡುಪಿಯಲ್ಲಿ ಉದ್ಯಮಿಯಾಗಿರುವ ಮೃತರು ಪತ್ನಿ, ತಾಯಿ, ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶ್ರೀಶ ನಾಯಕ್ ಸೇರಿದಂತೆ ಇಬ್ಬರು ಸಹೋದರು ಮತ್ತು ಓರ್ವ ಸಹೋದರಿಯನ್ನು ಅಗಲಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.