ಇ-ತ್ಯಾಜ್ಯ ನಿರ್ವಹಣೆಗೆ ವಿನೂತನ ‘ಇ-ಸ್ವಚ್ಛ ಭಾರತ್’
ಮಂಗಳೂರು, ಸೆ.12: ನಗರದಲ್ಲಿ ‘ವೀ ಆರ್ ಯುನೈಟೆಡ್’ ಘಟಕವು ‘ಸೈಬರ್ ಸೇಫ್ ಗರ್ಲ್’ ಸಹಯೋಗದಲ್ಲಿ ಪ್ರಥಮ ಬಾರಿಗೆ ‘ಇ-ಸ್ವಚ್ಛ ಭಾರತ್’ ಎಂಬ ವಿಶಿಷ್ಟ ಇ-ತ್ಯಾಜ್ಯ (ಇಲೆಕ್ಟ್ರಾನಿಕ್ ತ್ಯಾಜ್ಯ) ನಿರ್ವಹಣಾ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ. ಇ-ತ್ಯಾಜ್ಯ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಇ-ತ್ಯಾಜ್ಯಗಳ ಪ್ರಮಾಣ ತಗ್ಗಿಸುವುದು ನೂತನ ಯೋಜನೆಯ ಉದ್ದೇಶವಾಗಿದೆ.
ನಗರದ ಖಾಸಗಿ ಹೊಟೇಲ್ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸೈಬರ್ ಸೇಫ್ ಗರ್ಲ್ ಮುಖ್ಯಸ್ಥ, ಸೈಬರ್ ಭದ್ರತಾ ತಜ್ಞ ಡಾ.ಅನಂತಪ್ರಭು ಜಿ. ಮಾತನಾಡಿ, ಇ-ತ್ಯಾಜ್ಯ ಪುನರ್ಬಳಕೆ ಮಾಡುವ ಮೂಲಕ ಯೋಜನೆಯನ್ನು ಸ್ವಚ್ಛ ಭಾರತ ಅಭಿಯಾನದ ಭಾಗವಾಗಿಸುವ ಸದುದ್ದೇಶ ಹೊಂದಲಾಗಿದೆ. ‘ಇ-ಸ್ವಚ್ಛ ಭಾರತ್’ ಯೋಜನೆಗೆ ಅಕ್ಟೋಬರ್ 2ರಂದು ಚಾಲನೆ ನೀಡಲಾಗುವುದು ಎಂದು ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಗುತ್ತಿಗೆ ಪಡೆದಿರುವ ಆ್ಯಂಟನಿ ವೇಸ್ಟ್ ಮ್ಯಾನೇಜ್ಮೆಂಟ್ ಈಗಾಗಲೇ ಹಸಿಕಸ ಮತ್ತು ಒಣಕಸವನ್ನು ಪ್ರತ್ಯೇಕವಾಗಿ ಬೇರ್ಪಡಿಸಲಾಗುತ್ತಿದೆ. ಅದರಂತೆ ಇ-ತ್ಯಾಜ್ಯವನ್ನೂ ಇಲೆಕ್ಟ್ರಾನಿಕ್ಸ್ ಮತ್ತು ಇಲೆಕ್ಟ್ರಿಕಲ್ಸ್ (ವಿದ್ಯುತ್ ಮತ್ತು ವಿದ್ಯುನ್ಮಾನ ಉತ್ಪನ್ನ) ವಸ್ತುಗಳನ್ನು ವಿಂಗಡಿಸಬೇಕು. ಇದರಿಂದ ಇ-ತ್ಯಾಜ್ಯ ನಿರ್ವಹಣೆ ಸುಲಭವಾಗುತ್ತದೆ ಎಂದು ಅವರು ತಿಳಿಸಿದರು.
ನಗರದಲ್ಲಿ 200ಕ್ಕೂ ಹೆಚ್ಚು ಅಪಾರ್ಟ್ಮೆಂಟ್ಗಳಿವೆ. ಪ್ರತಿ ಅಪಾರ್ಟ್ಮೆಂಟ್ಗೂ ಭೇಟಿ ನೀಡಿ ಇ-ತ್ಯಾಜ್ಯ ಸಂಗ್ರಹಣಾ ದಿನದ ಮಾಹಿತಿಯ ಪೋಸ್ಟರ್ನ್ನು ಅಲ್ಲಿನ ನೋಟಿಸ್ ಬೋರ್ಡ್ನಲ್ಲಿ ಅಂಟಿಸಲಾಗುವುದು. ಬಳಿಕ ನಿರ್ದಿಷ್ಟವಾದ ದಿನದಂದು ಅಲ್ಲಿಗೆ ತೆರಳಿ ಇ-ತ್ಯಾಜ್ಯವನ್ನು ಸಂಗ್ರಹಿಸಲಾಗುವುದು. ಇ-ತ್ಯಾಜ್ಯ ಜವಾಬ್ದಾರಿಯುತವಾಗಿ ಮರುಬಳಕೆ ಮಾಡುವುದು ಅಗತ್ಯವಾಗಿದೆ ಎಂದರು.
ತಂತ್ರಜ್ಞಾನವು ಜೀವನದ ಪ್ರತಿಯೊಂದು ಹಂತದಲ್ಲೂ ಅವಿಭಾಜ್ಯ ಅಂಗವಾಗಿದೆ. ಈ ಹಿಂದೆ ಹಲವು ಉತ್ಪನ್ನಗಳಲ್ಲಿ ಇರದೇ ಇದ್ದ ಸೆಮಿ-ಕಂಡಕ್ಟರ್ಗಳು ಹಾಗೂ ಸೆನ್ಸರ್ಗಳು ಈಗಿನ ಉಪಕರಣಗಳಲ್ಲಿ ಹೆಚ್ಚಾಗಿ ಅಡಕವಾಗಿರುವುದರಿಂದ ಅಂಗೈಯಲ್ಲಿ ಕೊಂಡೊಯ್ಯಬಹುದಾದ ಮಾನಿಟರ್ಗಳು, ಅಂತರ್ಜಾಲಾಧರಿತ ಟಿವಿ ಪರದೆಯಲ್ಲೂ ಕಂಡಕ್ಟರ್ ಅಳವಡಿಸಿರುತ್ತಾರೆ. ವಿದ್ಯುತ್ ಮತ್ತು ವಿದ್ಯುನ್ಮಾನ ಉತ್ಪನ್ನಗಳ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ತ್ಯಾಜ್ಯ ನಿರ್ವಹಣೆಯ ಸಮಸ್ಯೆ ತಲೆದೋರಿದೆ ಎಂದರು.
ಇಲೆಕ್ಟ್ರಾನಿಕ್ ತ್ಯಾಜ್ಯ ಭಾರತದಲ್ಲಿ ಆರೋಗ್ಯ ಮತ್ತು ಪರಿಸರ ಸಂಬಂಧಿತ ವಿಚಾರವಾಗಿ ಹೊರಹೊಮ್ಮುತ್ತಿದೆ. ಭಾರತ ಜಗತ್ತಿನ 6ನೇ ಅತಿದೊಡ್ಡ ಇ-ತ್ಯಾಜ್ಯ ಉತ್ಪಾದಕ ದೇಶವಾಗಿದೆ. ಅಂದಾಜಿ ಎರಡು ಬಿಲಿಯನ್ ಟನ್ ಇ-ತ್ಯಾಜ್ಯ ದೇಶದಲ್ಲಿ ಉತ್ಪತ್ತಿಯಾಗುತ್ತಿದೆ. ವಾರ್ಷಿಕವಾಗಿ ಇ-ತ್ಯಾಜ್ಯಗಳಲ್ಲಿ ಕಂಪ್ಯೂಟರ್ ಸಾಧನಗಳ ಪಾಲು ಶೇ.70ರಷ್ಟಿದ್ದರೆ, ಶೇ.12ರಷ್ಟು ಟೆಲಿಕಾಂ ಕ್ಷೇತ್ರ, ಶೇ.8ರಷ್ಟು ವೈದ್ಯಕೀಯ ಪರಿಕರ, ಶೇ.7ರಷ್ಟು ಇಲೆಕ್ಟ್ರಾನಿಕ್ ಸಾಮಗ್ರಿಗಳಿಂದ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಎಂದು ಮಾಹಿತಿ ನೀಡಿದರು.
ವರ್ಲ್ಡ್ ಇಕನಾಮಿಕ್ ಫೋರಮ್ನ 2019ರ ವರದಿಯ ಪ್ರಕಾರ ಇ-ತ್ಯಾಜ್ಯ ಅತ್ಯಂತ ಕ್ಷಿಪ್ರವಾಗಿ ಹೆಚ್ಚುತ್ತಿದೆ. 2018ರಲ್ಲಿ 48.5 ಮಿಲಿಯನ್ ಟನ್ ತ್ಯಾಜ್ಯ ಉತ್ಪತ್ತಿಯಾಗಿದೆ. ಇಲೆಕ್ಟ್ರಾನಿಕ್ ಸಾಧನಗಳಲ್ಲಿ ಚಿನ್ನ, ಬೆಳ್ಳಿ, ತಾಮ್ರ, ಪ್ಲಾಟಿನಂ, ಲೀಥಿಯಂ, ಕೊಬಾಲ್ಟ್ ಹೀಗೆ ವಿವಿಧ ಲೋಹದ ವಸ್ತುಗಳ ಅಡಕವಾಗಿರುತ್ತವೆ. ಇವುಗಳನ್ನು ಮರುಬಳಕೆ ಮಾಡುವ ಮೂಲಕ ಮತ್ತೆ ಲೋಹಗಳನ್ನು ಪಡೆಯಬಹುದು. ಅಲ್ಲದೆ, ಈ ಸಾಧನಗಳಲ್ಲಿ ಸೀಸ, ಪಾದರಸ, ಕಾಡ್ಮೀನಿಯಂ, ಬೆರಿಲಿಯಂ, ಪಿವಿಸಿ ಪ್ಲಾಸ್ಟಿಕ್ನಂತಹ ವಿಷಕಾರಿ ರಾಸಾಯನಿಕಗಳಿದ್ದು, ಮನುಷ್ಯರ ಆರೋಗ್ಯಕ್ಕೆ ಹಾನಿಕರವಾಗಿದೆ. ಎಚ್ಚರಿಕೆಯಿಂದ ವಿಲೇವಾರಿ ಮಾಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ವೇಸ್ಟ್ ಮ್ಯಾನೇಜ್ಮೆಂಟ್ ತಜ್ಞ ಹಾಗೂ ಉದ್ಯಮಿ ರಕ್ಷಿತ್ ಶೆಟ್ಟಿ, ಕೊರಗಪ್ಪ, ಕೃಷ್ಣ ಶೆಟ್ಟಿ ತಾರೆಮಾರು, ಅಝ್ಫರ್ ರಝಾಕ್ ಮತ್ತಿತರರು ಉಪಸ್ಥಿತರಿದ್ದರು.
ಹೆಚ್ಚು ಇ-ತ್ಯಾಜ್ಯ ನೀಡುವವರಿಗೆ ಶ್ಲಾಘನೆ ಪತ್ರ
ಇ-ತ್ಯಾಜ್ಯ ವಸ್ತುಗಳನ್ನು ನೀಡಿ ಈ ಯೋಜನೆಗೆ ಬೆಂಬಲ ಸೂಚಿಸುವ ಎಲ್ಲರಿಗೂ ‘ಸೈಬರ್ ಸೇಫ್ ಗರ್ಲ್’ ಪುಸ್ತಕದ ಪ್ರತಿಯನ್ನು ನೀಡಲಾಗುವುದು. ಅತಿಹೆಚ್ಚು ಇ-ತ್ಯಾಜ್ಯ ನೀಡಿದವರಿಗೆ ಶ್ಲಾಘನಾ ಪ್ರಮಾಣ ಪತ್ರ ನೀಡಲಾಗುವುದು ಸೈಬರ್ ಭದ್ರತಾ ತಜ್ಞ ಡಾ.ಅನಂತಪ್ರಭು ಜಿ. ತಿಳಿಸಿದರು.