ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ
ಅವೈಜ್ಞಾನಿಕ ಬಸ್ ಶೆಲ್ಟರ್: ತನಿಖೆಗೆ ಸಂಸದ ನಳಿನ್ ಸೂಚನೆ
ಮಂಗಳೂರು, ಸೆ.12: ಸ್ಮಾರ್ಟ್ಸಿಟಿ ಯೋಜನೆಯಡಿ ಮಂಗಳೂರು ನಗರದ ವಿವಿಧೆಡೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಬಸ್ ಶೆಲ್ಟರ್ಗಳ ಯೋಜನಾ ವೆಚ್ಚ ಅಧಿಕವಿದೆ. ಈ ಬಗ್ಗೆ ವಿಚಾರಣೆ ನಡೆಸುವಂತೆ ಲೋಕಸಭಾ ಸಂಸದ ನಳೀನ್ ಕುಮಾರ್ ಕಟೀಲ್ ಸೂಚಿಸಿದ್ದಾರೆ.
ದ.ಕ. ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡುತ್ತಿದ್ದರು.
ಸ್ಮಾರ್ಟ್ಸಿಟಿಯಡಿ ಪ್ರತಿ ಬಸ್ ಶೆಲ್ಟರ್ಗೆ 12 ಲಕ್ಷ ರೂ. ಖರ್ಚು ಮಾಡಲಾಗಿದೆ. ಆದರೆ ಈ ಬಸ್ ಶೆಲ್ಟರ್ನಲ್ಲಿ ವಿನ್ಯಾಸ ಅವೈಜ್ಞಾನಿಕವಾಗಿದೆ. ಬಸ್ ಶೆಲ್ಟರ್ನ ವಿಸ್ತೀರ್ಣ 600 ಚದರ ಅಡಿಯಿದೆ ಎಂದು ತಿಳಿಸಲಾಗಿದೆ. ಆದರೆ ಅಷ್ಟೊಂದು ವಿಸ್ತೀರ್ಣ ಕಂಡು ಬರುತ್ತಿಲ್ಲ. ದಿಲ್ಲಿಯಲ್ಲಿ ಕೇವಲ ಆರು ಲಕ್ಷ ರೂ.ಗೆ ಇಂತಹ ಬಸ್ ಶೆಲ್ಟರ್ ನಿರ್ಮಿಸಲಾಗಿದೆ. ಇಲ್ಲಿ ಅಪಾರ ವೆಚ್ಚ ಆಗಿರುವ ಬಗ್ಗೆ ತನಿಖೆ ನಡೆಸುವಂತೆ ಸಂಸದರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು.
ಸ್ಮಾರ್ಟ್ಸಿಟಿ ಯೋಜನೆಯಡಿ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಬಸ್ ಶೆಲ್ಟರ್ ನಿರ್ಮಾಣ ಕೈಗೆತ್ತಿಕೊಳ್ಳಬಾರದು ಎಂದು ಸಂಸದ ನಳಿನ್ಕುಮಾರ್ ಕಟೀಲ್ ಅಧಿಕಾರಿಗಳಿಗೆ ಖಡಕ್ ಸೂಚನೆ ರವಾನಿಸಿದ್ದಾರೆ.
ಸ್ಮಾರ್ಟ್ಸಿಟಿ ಯೋಜನೆಯಡಿ ನಗರದ ಹಂಪನಕಟ್ಟೆ ಕ್ಲಾಕ್ ಟವರ್ ನಿರ್ಮಾಣವನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದನ್ನೂ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ಸಂಚಾರ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ಸಂಸದರು ಆಕ್ಷೇಪ ವ್ಯಕ್ತಪಡಿಸಿದರು.
ಕ್ಲಾಕ್ ಟವರ್ನಿಂದ ಆರ್ಟಿಒ ಸರ್ಕಲ್ನವರೆಗೆ ಕೇವಲ 300 ಮೀಟರ್ ರಸ್ತೆಗೆ ಕಾಂಕ್ರಿಟೀಕರಣ ಮಾಡಲು ಆರು ಕೋಟಿಯಷ್ಟು ಮೊತ್ತ ನಿಗದಿ ಮಾಡಿರುವುದಕ್ಕೆ ಸಂಸದ ನಳಿನ್ಕುಮಾರ್ ಕಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ತಪ್ಪಿದ ಒಳಚರಂಡಿ ಸಂಪರ್ಕ ಸರಿಪಡಿಸಲು 55 ಕೋಟಿ ರೂ.ನ್ನು ಅಮೃತ್ ಯೋಜನೆಯಡಿ ಇಡಲಾಗಿದೆ. ಆದರೂ ಸ್ಮಾರ್ಟ್ಸಿಟಿಯಲ್ಲಿ ಮತ್ತೆ ಇದೇ ಯೋಜನೆಗೆ ಹಣ ನಿಗದಿ ಪಡಿಸಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಈ ಯೋಜನೆಗೆ ಸ್ಮಾರ್ಟ್ಸಿಟಿ ವತಿಯಿಂದ ಹಣ ನೀಡದಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಂಕನಾಡಿ ರೈಲು ನಿಲ್ದಾಣ ರಸ್ತೆಯನ್ನು ಪಡೀಲ್ನಿಂದ ರೈಲು ನಿಲ್ದಾಣದ ಮೂಲಕ ನಾಗುರಿವರೆಗೆ ರಿಂಗ್ ರಸ್ತೆ ಮಾದರಿಯಲ್ಲಿ ಸ್ಮಾರ್ಟ್ಸಿಟಿ ಅಡಿಯಲ್ಲಿ ಅಭಿವೃದ್ಧಿ ಪಡಿಸಬೇಕು. ಪಂಪ್ವೆಲ್ನಲ್ಲಿ ಕೇಂದ್ರ ಬಸ್ ನಿಲ್ದಾಣ ನಿರ್ಮಾಣವನ್ನು ತ್ವರಿತ ರೀತಿಯಲ್ಲಿ ಯೋಜನೆ ಜಾರಿಗೆ ತರಬೇಕು. ಹಂಪನಕಟ್ಟೆ ಹಳೇ ಸರ್ವಿಸ್ ಬಸ್ ನಿಲ್ದಾಣದಲ್ಲಿ ಬಹುಮಹಡಿ ಪಾರ್ಕಿಂಗ್ ಸಂಕೀರ್ಣವನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳಲು ಅವರು ಸೂಚಿಸಿದರು.