ನಿಷ್ಪಕ್ಷಪಾತ ನಿರ್ಣಯದಿಂದ ಸ್ಪರ್ಧಾಳುಗಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು: ಎಂ.ಆರ್.ಮುಂಜಿ
ನವಾಯತ್ ಕಾಲೋನಿ ಮತ್ತು ನ್ಯಾಶನಲ್ ಕಾಲೋನಿ ಉರ್ದು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ
ಭಟ್ಕಳ: ತಾಲೂಕಿನ ನವಾಯತ್ ಕಾಲೋನಿ ಹಾಗೂ ನ್ಯಾಶನಲ್ ಕಾಲೋನಿ ಕ್ಲಸ್ಟರ್ ಮಟ್ಟದ ಉರ್ದು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆಗಳು ನಗರದ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯಲ್ಲಿ ಬುಧವಾರ ಜರಗಿದವು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ, ಉರ್ದು ಪ್ರೌಢಶಾಲೆಗಳಿಗಾಗಿಯೇ ವಲಯ ಮಟ್ಟದಲ್ಲಿ ಪ್ರತ್ಯೇಕವಾಗಿ ಪ್ರತಿಭಾ ಕಾರಂಜಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು ಇದರಿಂದಾಗಿ ಉರ್ದು ಮಾಧ್ಯಮದ ಹೆಚ್ಚಿನ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ ಎಂದರು.
ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಶುಭಾ ಹಾರೈಸಿದ ಅವರು, ನಿರ್ಣಯಕರು ಯಾವುದೇ ರೀತಿಯ ತಾರತಮ್ಯ ನೀತಿಯನ್ನು ಅನುಸರಿಸದೆ ಉತ್ತಮ ನಿರ್ಣಯಗಳನ್ನು ನೀಡುವುದರ ಮೂಲಕ ಸ್ಪರ್ಧಿಗಳಿಗೆ ಆತ್ಮಸ್ಥೈರ್ಯ ತುಂಬುವಂತಹ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ರಹೀಮ್ ಜುಕಾಕೋ, ಉರ್ದು ಮಾಧ್ಯಮದ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಚೆನ್ನಾಗಿ ಕಲಿತುಕೊಂಡು ಕನ್ನಡ ವಿದ್ಯಾರ್ಥಿಗಳೊಂದಿಗೆ ಆತ್ಮಸ್ಥೈರ್ಯದೊಂದಿಗೆ ಸ್ಪರ್ಧಿಸುವಂತಾಗಬೇಕು, ಇದಕ್ಕಾಗಿ ಕನ್ನಡದ ಮಹತ್ವನ್ನು ಅರಿತು ಆ ಭಾಷೆಯನ್ನು ಕಲಿಯುವ ಕಡೆಗೆ ಹೆಚ್ಚಿನ ಒಲವು ತೋರಿಸಬೇಕು ಎಂದರು.
ಅಂಜುಮನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಇಸ್ಮಾಯಿಲ್ ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದರು.
ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯ ಮುಖ್ಯಾಧ್ಯಾಪಕ ಶಬ್ಬಿರ್ ಆಹ್ಮದ್ ದಫೇದಾರ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಮುಹಿದ್ದೀನ್ ಖತ್ತಾಲಿ ಧನ್ಯವಾದ ಅರ್ಪಿಸಿದರು. ಮೌಲ್ವಿ ಅಬ್ದುಲ್ ಹಫೀಝ್ ಖಾನ್ ಕಾರ್ಯಕ್ರಮ ನಿರೂಪಿಸಿದರು.