ಉಡುಪಿ: ಮನೆಗೆ ನುಗ್ಗಿ 22 ಲಕ್ಷ ರೂ. ನಗದು ಕಳವು
ಉಡುಪಿ, ಸೆ.13: ಹಾಡುಹಗಲೇ ಮನೆಗೆ ನುಗ್ಗಿದ ಕಳ್ಳರು, ಅಡುಗೆ ಕೋಣೆ ಒಳಗೆ ಡಬ್ಬದಲ್ಲಿರಿಸಿದ್ದ 22 ಲಕ್ಷ ರೂ. ನಗದು ಹಾಗೂ ಬೆಳ್ಳಿ ಕಳವು ಮಾಡಿರುವ ಘಟನೆ ನಗರದ ಒಳಕಾಡು ಹರಿಶ್ಚಂದ್ರ ಮಾರ್ಗ ಎಂಬಲ್ಲಿ ಸೆ.12ರಂದು ಮಧ್ಯಾಹ್ನ ವೇಳೆ ನಡೆದಿದೆ.
ಒಳಕಾಡು ಹರಿಶ್ಚಂದ್ರ ಮಾರ್ಗದ ಛತ್ರಪತಿ ಶಿವಾಜಿ ರೋಡ್ ನಿವಾಸಿ ಸುನಂದ ಮಾಣಿಕ್ಯ ಪಾಟೀಲ್ ಎಂಬವರು ಮಧ್ಯಾಹ್ನ 12:15ರ ಸುಮಾರಿಗೆ ಮುಕುಂದಕೃಪಾ ಶಾಲೆಗೆ ಮಕ್ಕಳಿಗೆ ಟಿಫಿನ್ ಕೊಡಲು ಮನೆಗೆ ಬೀಗ ಹಾಕಿ ಹೋಗಿದ್ದು, ಸುಮಾರು 1 ಗಂಟೆಗೆ ವಾಪಾಸು ಬಂದು ನೋಡಿದಾಗ ಮನೆಯ ಬಾಗಿಲಿನ ಬೀಗವನ್ನು ಮುರಿದಿರುವುದು ಕಂಡು ಬಂತ್ತೆನ್ನಲಾಗಿದೆ.
ಅಡುಗೆ ಮನೆಗೆ ಹೋಗಿ ನೋಡಿದಾಗ ಪಾತ್ರೆಗಳು ಚೆಲ್ಲಾಪಿಲ್ಲಿಯಾಗಿದ್ದು ಡಬ್ಬಗಳಲ್ಲಿದ್ದ 22 ಲಕ್ಷ ರೂ. ಹಣ ಮತ್ತು ಸುಮಾರು 30,000 ರೂ. ಮೌಲ್ಯದ ಅರ್ಧ ಕೆಜಿ ಬೆಳ್ಳಿ ಕಳವು ಆಗಿರುವುದು ಕಂಡುಬಂದಿದೆ. ಈ ಕೃತ್ಯವನ್ನು ಸುನಂದ ಮಾಣಿಕ್ಯ ಪಾಟೀಲ್ರ ಗಂಡನ ಸಂಬಂಧಿಯಾದ ಸಾಂಗ್ಲಿಯ ಅತುಲ್ ಬಾಗ್ನೆ ಹಾಗೂ ಇನ್ನೊಬ್ಬನು ಸೇರಿ ಮಾಡಿರುವುದಾಗಿದೆ ಎಂದು ದೂರಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.