‘ಸ್ಕೌಟ್ಸ್ನಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆ ಸಾಧ್ಯ’
ಉಡುಪಿ, ಸೆ.14: ಬೇಡನ್ ಪೋವೆಲ್ ಬರೆದ ಶತಮಾನ ಕಂಡ ಪುಸ್ತಕ ‘ಹುಡುಗರಿಗಾಗಿ ಸ್ಕೌಟಿಂಗ್’ ಇಂದಿಗೂ ಪ್ರತಿಯೊಬ್ಬ ವಿದ್ಯಾರ್ಥಿಯೂ ಓದಲೇ ಬೇಕಾದ ಪುಸ್ತಕ. ವಿದ್ಯಾರ್ಥಿಗಳಿಗೆ ಅಗತ್ಯವಾದ ಎಲ್ಲಾ ಲಘು ಕೌಶಲ್ಯಗಳು ಈ ಗ್ರಂಥದಲ್ಲಿ ನಿರೂಪಿಸ ಲಾಗಿದೆ ಎಂದು ಬ್ರಹ್ಮಾವರದ ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ನ ಮ್ಯಾನೇಜಿಂಗ್ ಟ್ರಸ್ಟಿ ಪ್ರಕಾಶ್ಚಂದ್ರ ಶೆಟ್ಟಿ ಹೇಳಿದ್ದಾರೆ.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ಉಡುಪಿ ಜಿಲ್ಲಾ ಸಂಸ್ಥೆಯ ಮತ್ತು ಕಲ್ಯಾಣಪುರ ಸ್ಥಳೀಯ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಲಾದ ರಾಜ್ಯ ಮಟ್ಟದ ರೇಂಜರಿಂಗ್ ಶತಮಾನೋತ್ಸವ, ರೋವರ್ಸ್-ರೇಂಜರ್ಸ್ ಮೂಟ್ ಮತ್ತು ರೋವರ್ ಸ್ಕೌಟ್ ಲೀಡರ್-ರೇಂಜರ್ ಲೀಡರ್ಗಳ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾವಹಿಸಿ ಅವರು ಮಾತನಾಡುತಿದ್ದರು.
ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಗೆ ನೀಡುತ್ತಿರುವ ನಿರಂತರ ಪ್ರೋತ್ಸಾಹಕ್ಕಾಗಿ ಪ್ರಕಾಶ್ಚಂದ್ರ ಶೆಟ್ಟಿ ಅವರನ್ನು ರಾಜ್ಯ ಸಂಸ್ಥೆಯ ಜಂಟಿ ಕಾರ್ಯದರ್ಶಿ ರಾಮಲತಾ ಸನ್ಮಾನಿಸಿದರು.
ಉಡುಪಿಯ ಸ್ಕೌಟ್ಸ್ ಆಯುಕ್ತ ಡಾ.ವಿಜೇಂದ್ರ ವಸಂತ್ ಸಮಾರೋಪ ಭಾಷಣದಲ್ಲಿ ಯುವ ಜನತೆ ಛಲದಿಂದ ಮುನ್ನುಗಿದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವೆಂದು ನುಡಿದರು.
ಕಾರ್ಯಕ್ರಮ ಸಂಘಟಕ ಡಾ.ಜಯರಾಮ್ ಶೆಟ್ಟಿಗಾರ್ ಸಮಾವೇಶದ ವರದಿ ವಾಚಿಸಿದರು. ಸ್ಪರ್ಧಾ ವಿಜೇತರರ ಪಟ್ಟಿಯನ್ನು ಜ್ಯೋತಿ ಆಚಾರ್ಯ ಓದಿದರು. ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸವಿತ ಕೆ., ಗೈಡ್ ಆಯುಕ್ತೆ ಜ್ಯೋತಿ ಜೆ.ಪೈ, ಖಜಾಂಚಿ ದೇವಾನಂದ್, ಉಪಾಧ್ಯಕ್ಷರಾದ ಜ್ಯೋತಿ ಹೆಬ್ಬಾರ್, ರಾಮಲತಾ, ಬಿ.ಆನಂದ ಅಡಿಗ, ಐ.ಕೆ.ಜಯಚಂದ್ರ, ವಿಜಯ್ ಮಾಯಾಡಿ, ಪ್ರತೀಮ್ ಕುಮಾರ್, ಅಶೋಕ್ ಭಟ್, ನಿತಿನ್ ಅಮಿನ್, ಸುಮನ್ ಶೇಖರ್ ಮೊದಲಾದವರು ಉಪಸ್ಥಿತರಿದ್ದರು.