ಚಾರ್ಮಾಡಿ ಘಾಟ್: ಲಘು ವಾಹನ ಸಂಚಾರಕ್ಕೆ ಮುಕ್ತ
ಮಂಗಳೂರು, ಸೆ.15: ಚಾರ್ಮಾಡಿ ಘಾಟ್ ರಸ್ತೆಯ ಮಾರ್ಗದಲ್ಲಿ ಷರತ್ತುಬದ್ಧವಾಗಿ ಲಘು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಿ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಆದೇಶ ಹೊರಡಿಸಿದ್ದಾರೆ.
ಚಾರ್ಮಾಡಿ ಘಾಟ್ನಲ್ಲಿ ಆ.8ರಂದು ಭಾರೀ ಮಳೆ ಸುರಿದಿತ್ತು. ರಾ.ಹೆ. 73ರ ಮಂಗಳೂರು-ವಿಲ್ಲುಪುರಂ ರಸ್ತೆಯ 76 ಕಿ.ಮೀ.ನಿಂದ 86 ಕಿ.ಮೀ. (ದ.ಕ. ಜಿಲ್ಲಾ ವ್ಯಾಪ್ತಿ) ವರೆಗಿನ ರಸ್ತೆಯ ವಿವಿಧೆಡೆ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತದಂತಹ ಅವಘಡಗಳು ಸಂಭವಿಸಿದ್ದವು. ರಸ್ತೆ ದುರಸ್ತಿ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ಆ.15ರಿಂದ ಸೆ.14ರವರೆಗೆ ನಿಷೇಧಿಸಲಾಗಿತ್ತು.
ಸದ್ಯ ಲಘು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಚಾರ್ಮಾಡಿ ಘಾಟ್ ರಸ್ತೆಯ ಮಾರ್ಗದಲ್ಲಿ ಸೆ.15ರಂದು ಬೆಳಗ್ಗೆ 6ಗಂಟೆಯಿಂದ ಅ.14ರವರೆಗೆ ಎಲ್ಲ ರೀತಿಯ ಭಾರೀ ವಾಹನಗಳ ಸಂಚಾರ ನಿಷೇಧ ಮುಂದುವರಿಯಲಿದೆ.
ಲಘು ವಾಹನಗಳು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ. ಸಂಜೆ 6ರಿಂದ ಬೆಳಗ್ಗೆ 6 ಗಂಟೆವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಚಾರ್ಮಾಡಿ ಘಾಟ್ ಭಾಗದಲ್ಲಿ ಅವಕಾಶ ಕಲ್ಪಿಸಿರುವ ಲಘು ವಾಹನಗಳ ವೇಗದ ಮಿತಿಯನ್ನು ಪ್ರತಿ ಗಂಟೆಗೆ 20ಕಿ.ಮೀ.ಗೆ ಮೀರದಂತೆ ಸಂಚರಿಸಬೇಕು. ಕೆಲವೆಡೆ ಭೂಕುಸಿತದಿಂದ ರಸ್ತೆಗೆ ತೀವ್ರತರ ಹಾನಿ ಸಂಭವಿಸಿರುವುದರಿಂದ ಅತ್ಯಂತ ಜಾಗರೂಕತೆಯಿಂದ ವಾಹನ ಗಳನ್ನು ಚಾಲನೆ ಮಾಡಬೇಕು. ಚಾರ್ಮಾಡಿ ಘಾಟ್ನಲ್ಲಿ ಫೋಟೋಗ್ರಫಿ ಮತ್ತು ಸೆಲ್ಫಿ ತೆಗೆಯುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಆದೇಶದಲ್ಲಿ ತಿಳಿಸಿದ್ದಾರೆ.
ವಾಹನಗಳ ವರ್ಗೀಕರಣ
ಸಂಚರಿಸಬಹುದಾದ ಲಘು ವಾಹನಗಳು: ಕಾರು, ಜೀಪು, ಟೆಂಪೋ, ವ್ಯಾನ್, ಎಲ್ಸಿವಿ (ಮಿನಿ ವ್ಯಾನ್), ದ್ವಿಚಕ್ರ ವಾಹನಗಳು ಮತ್ತು ಆ್ಯಂಬುಲೆನ್ಸ್.
ನಿರ್ಬಂಧಿಸಲಾದ ಭಾರೀ ವಾಹನಗಳು
ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೊ ಕಂಟೈನರ್ಸ್, ಉದ್ದನೆಯ ಚಾಸೀಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಎಕ್ಸೆಲ್ ಟ್ರಕ್, ಟ್ರಕ್ ಟ್ರೈಲರ್, ಸಾರ್ವಜನಿಕರು ಸಂಚರಿಸುವ ಬಸ್ಗಳು, ರಾಜಹಂಸ ಮತ್ತು ಎಲ್ಲ ಬಗೆಯ ಅಧಿಕ ಭಾರದ ಸರಕು ಸಾಗಣೆ ವಾಹನಗಳು.