ಬಿಜೆಪಿ ಶಾಸಕರು, ಸಂಸದರಿಂದ ಬಿಲ್ಲವ ಸಮಾಜಕ್ಕೆ ಅಪಮಾನ: ನವೀನ್ ಅಮೀನ್ ಶಂಕರಪುರ
ಉಡುಪಿ, ಸೆ.16: ಉಡುಪಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಟಪಾಡಿಯ ಶ್ರೀವಿಶ್ವನಾಥ ಕ್ಷೇತ್ರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರುಗಳ 165ನೇ ಜನ್ಮದಿನಾಚರಣೆಯಲ್ಲಿ ಜಿಲ್ಲೆಯ ಯಾವೊಬ್ಬ ಶಾಸಕರು, ಸಂಸದರು ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಪಾಲ್ಗೊಳ್ಳದೇ ಬಿಲ್ಲವ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಉಡುಪಿ ಜಿಲ್ಲೆ ಬಿಲ್ಲವರ ಪರಿಷತ್ತಿನ ಜಿಲ್ಲಾಧ್ಯಕ್ಷ ನವೀನ್ ಅಮೀನ್ ಶಂಕರಪುರ ತಿಳಿಸಿದ್ದಾರೆ.
ಉಡುಪಿಯಲ್ಲಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯ ಸಂದರ್ಭದಲ್ಲಿ ಬಿಲ್ಲವರ ಮತ ಬ್ಯಾಂಕ್ ಉದ್ದೇಶವನ್ನಿಟ್ಟು ಕೊಂಡು ಒಲೈಕೆ ಮಾಡುವ ಈ ಜನಪ್ರತಿನಿಧಿಗಳ ನಿಜ ಅಂತರಂಗ, ನಾರಾಯಣಗುರುಗಳ ಜನ್ಮದಿನಾಚರಣೆಗೆ ಗೈರುಹಾಜರಾಗುವ ಮೂಲಕ ಬಹಿರಂಗಗೊಂಡಿದೆ. ಇದು ಬಿಲ್ಲವ ಸಮಾಜಕ್ಕೆ ಅತ್ಯಂತ ಬೇಸರದ ಸಂಗತಿ ಎಂದವರು ನುಡಿದರು.
ಸರಳ, ಸಜ್ಜನಿಕೆಯ ರಾಜಕಾರಣಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿರುವುದಕ್ಕೆ ಜನಸಾಮಾನ್ಯರೆಲ್ಲರೂ ಸಂತಸ ಹಾಗೂ ಹೆಮ್ಮೆ ಪಡುತಿದ್ದರೆ, ನಮ್ಮ ಜಿಲ್ಲೆಯ ಶಾಸಕರುಗಳು ಮಾತ್ರ ಒಳಗಿಂದೊಳಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಗುಟ್ಟಾಗುಳಿದಿಲ್ಲ ಎಂದವರು ಆರೋಪಿಸಿದರು.
ಗುರುಜಯಂತಿ ಕಾರ್ಯಕ್ರಮವನ್ನು ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟನೆ ಮಾಡಲಿರುವುದರಿಂದ, ತಾವುಗಳು ತಟಸ್ಥರಾಗುಳಿದು ಅಸಹಕಾರ ನೀಡುವ ಧೋರಣೆಯೊಂದಿಗೆ ಇವರೆಲ್ಲರೂ ಗೈರುಹಾಜರಾಗಿರುವುದನ್ನು ಅಲ್ಲಗೆಳೆಯುವಂತಿಲ್ಲ ಎಂದು ನವೀನ್ ಅಮೀನ್ ನುಡಿದರು.
ಕರಾವಳಿಯ ಏಕೈಕ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗುವುದು ಬೇಡವೆಂದು ಉಡುಪಿ ಜಿಲ್ಲೆಯ ಕೆಲವು ಶಾಸಕರುಗಳ ಸಹಿಯೊಂದಿಗೆ ಅಧಿಕೃತ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ನೀಡಿರುವ ಮಾಹಿತಿ ಇದ್ದು, ಇದು ಖಂಡನಾರ್ಹ ಎಂದು ಅವರು ಹೇಳಿದರು.
ಓರ್ವ ಆದರ್ಶ ರಾಜಕಾರಣಿಯ ಸೇವಾ ಮನೋಭಾವಕ್ಕೆ ನೀಡಿರುವ ಸಚಿವ ಸ್ಥಾನಮಾನಕ್ಕೆ ಜಿಲ್ಲೆಯ ಇಡೀ ಬಿಲ್ಲವ ಸಮುದಾಯದ ಸಂಘಟನಾತ್ಮಕ ನಿಲುವು ಕೋಟ ಶ್ರೀನಿವಾಸ ಪೂಜಾರಿ ಅವರ ಪರವಾಗಿರುತ್ತದೆ ಎಂದು ಅವರು ಘೋಷಿಸಿದರು. ಈ ತರಹದ ಬೆಳವಣಿಗೆಯು ಬಹುಸಂಖ್ಯಾತ ಬಿಲ್ಲವರ ಮತಗಳಿಂದಲೇ ಆಯ್ಕೆಯಾದ ಶಾಸಕರುಗಳ ಘನತೆಗೆ ಶೋಭೆ ತರುವುದಿಲ್ಲ. ಸೌಹಾರ್ದ, ಸಹಬಾಳ್ವೆ ಬಯಸುವ ಬಿಲ್ಲವ ಸಮಾಜಕ್ಕೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವ ಜನಪ್ರತಿನಿಧಿಗಳ ಧೋರಣೆಯ ವಿರುದ್ಧವಾಗಿ ಪ್ರತಿಭಟನೆ ಇಲ್ಲವೇ ಮತ ಬಹಿಷ್ಕಾರದಂತಹ ಸೂಕ್ತ ನಿರ್ಧಾರ ಕೈಗೊಳ್ಳಲು ನಾವು ಸಿದ್ದರಿದ್ದೇವೆ ಎಂದವರು ಎಚ್ಚರಿಕೆ ನೀಡಿದರಲ್ಲದೇ, ತಮ್ಮ ಅಧಿಕಾರ ಲಾಲಸೆಯಲ್ಲಿ ಸಮಸ್ತ ಬಿಲ್ಲವ ಸಮಾಜದ ಹಿತಾಸಕ್ತಿಗೆ ಯಾವತ್ತೂ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ ಎಂದು ನವೀನ್ ಅಮೀನ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬಿಲ್ಲವರ ಪರಿಷತ್ತಿನ ಕಾರ್ಯದರ್ಶಿ ಪ್ರಭಾಕರ ಕೆ. ಪಾಲನ್, ಕೋಶಾಧಿಕಾರಿ ಚಂದ್ರಹಾಸ ಕೋಟ್ಯಾನ್, ಮಹಿಳಾ ಸಂಘಟನೆಯ ಆಶಾ ಕಟಪಾಡಿ, ಉಪಾಧ್ಯಕ್ಷ ಬದ್ರಿನಾತ ಸನೀಲ್, ರಮೇಶ್ ಆಂಚನ್, ವಿನೋದ್ ಅಮೀನ್ ಕೋಟೆ, ಮಹೇಶ್ ಪೂಜಾರಿ ಉಪಸ್ಥಿತರಿದ್ದರು.