ಶಾಸಕ ಸುನಿಲ್ ನಾಯ್ಕ್ ರಿಂದ ಶಿರಾಲಿಯಲ್ಲಿ ದಸರಾ ಕ್ರೀಡಾ ಕೂಟ ಉದ್ಘಾಟನೆ
ಭಟ್ಕಳ: ಜಿ.ಪಂ. ಉತ್ತರಕನ್ನಡ, ತಾ.ಪಂ. ಭಟ್ಕಳ, ತಾಲೂಕು ಯುವ ಒಕ್ಕೂಟ ಹಾಗೂ ದುರ್ಗಾಪರಮೇಶ್ವರಿ ಯುವಕ ಸಂಘ ತಟ್ಟಿಹಕ್ಕಲ್ ಇದರ ಸಂಯುಕ್ತಾಶ್ರಯದಲ್ಲಿ ಶಿರಾಲಿ ಪಂಚಾಯತ್ ವ್ಯಾಪ್ತಿಯ ತಟ್ಟಿಹಕ್ಕಲ್ ಮೈದಾನದಲ್ಲಿ ನಡೆದ ತಾಲೂಕುಮಟ್ಟದ ದಸರಾ ಕ್ರೀಡಾಕೂಟವನ್ನು ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ಬಿ.ನಾಯ್ಕ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪಠ್ಯೇತರ ಚಟುವಟಿಗಳ ಮೂಲಕ ಶಿಕ್ಷಣವನ್ನು ಸುಲಭವಾಗಿ ಗ್ರಹಿಸಲು ಸಾಧ್ಯವಿದ್ದು ಕ್ರೀಡೆಯು ಶಿಕ್ಷಣವನ್ನು ಪರಿಪೂರ್ಣಗೊಳಿಸುತ್ತದೆ ಎಂದರು. ದಸರಾ ಕ್ರೀಡಾಕೂಟಗಳಿಂದ ಗ್ರಾಮೀಣ ಪ್ರತಿಭೆಗಳ ಅನಾವರಣಗೊಳ್ಳುತ್ತಿದ್ದು ಇದು ನಿರಂತರವಾಗಿ ನಡೆದು ವಿದ್ಯಾರ್ಥಿ ಯುವಕರ ಸರ್ವಾಂಗೀಣ ಅಭಿವೃದ್ಧಿಯಾಗಬೇಕು ಎಂದರು.
ಶಿರಾಲಿ ಗ್ರಾ.ಪಂ ಅಧ್ಯಕ್ಷ ವೆಂಕಟೇಶ್ ನಾಯ್ಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಸದಸ್ಯೆ ಮಾಲತಿ ದೇವಾಡಿಗ ಸಂದರ್ಭೋಚಿತವಾಗಿ ಮಾತನಾಡಿದರು. ಯುವಜನ ಕ್ರೀಡಾಧಿಕಾರಿ ನಗರಾಜ ಪಟಗಾರ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ್ ನಾಯ್ಕ ಪ್ರತಿಜ್ಞಾವಿಧಿ ಬೋಧಿಸಿದರು. ಎಸ್.ಜಿ. ಹೆಗಡೆ ಧನ್ಯವಾದ ಅರ್ಪಿಸಿದರು. ಚಿದಾನಂದಾ ಕಾರ್ಯಕ್ರಮ ನಿರೂಪಿಸಿದರು.
ಭಟ್ಕಳ ತಾ.ಪಂ. ಸದಸ್ಯ ಹನುಮಂತ ನಾಯ್ಕ, ಕಾರ್ಯನಿರ್ವಾಣಾಧಿಕಾರಿ ಲಕ್ಷ್ಮೀನಾರಾಯಣ ಸ್ವಾಮಿ, ಕ್ಷೇತ್ರಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ದೇವಾರಾಯ ನಾಯಕ. ಶಿರಾಲಿ ಗ್ರಾ.ಪಂ.ಸದಸ್ಯ ಲಕ್ಷ್ಮೀನಾರಾಯಣ ನಾಯ್ಕ, ರಾಮಚಂದ್ರ ನಾಯ್ಕ, ಸಾಕ್ಷರತಾ ಅಧಿಕಾರಿ ಮೋಹನ ನಾಯ್ಕ, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.