ಮಂಗಳೂರು: ಸ್ವಚ್ಛ ಸರ್ವೇಕ್ಷಣಾ ಕಲಾಜಾಥಾಕ್ಕೆ ಚಾಲನೆ
ಮಂಗಳೂರು, ಸೆ.17: ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಗ್ರಾಮೀಣ ಕರ್ನಾಟಕವನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಪೋಷಣೆ ಮಾಡಲಾದ ಹಿನ್ನ್ನೆಲೆ ಮತ್ತು ಗ್ರಾಮೀಣ ಸಮುದಾಯದಲ್ಲಿ ಶೌಚಾಲಯ ಬಳಕೆ ಹಾಗು ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ-2019ರ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಮಂಗಳವಾರ ದ.ಕ.ಜಿಪಂ ಕಚೇರಿ ಮುಂದೆ ಸ್ವಚ್ಛ ಸರ್ವೇಕ್ಷಣಾ ಕಲಾ ಜಾಥಾಕ್ಕೆ ದ.ಕ.ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಚಾಲನೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಪ್ರಸಕ್ತ ವರ್ಷ ಮೊದಲ ಹಂತದಲ್ಲಿ 2,000 ಗ್ರಾಪಂಗಳಲ್ಲಿ ನೀರು ಮತ್ತು ನೈರ್ಮಲ್ಯ ಕುರಿತು ಜಾಗೃತಿ ಮೂಡಿಸಿ ತ್ಯಾಜ್ಯ ಮುಕ್ತ ಗ್ರಾಮಗಳನ್ನಾಗಿ ರೂಪಿಸುವ ಗುರಿ ಹೊಂದಲಾಗಿರುತ್ತದೆ. ಜಿಲ್ಲೆಯ ಆಯ್ದ ಗ್ರಾಪಂಗಳಲ್ಲಿ ಸಂಚಾರ ವಾಹನದಲ್ಲಿ ಕಲಾ ಜಾಥಾವು (ಶ್ರವ್ಯ, ದೃಶ್ಯ ಮಾಧ್ಯಮ, ಬೀದಿ ನಾಟಕ, ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಿನಿಮಾ, ಡಾಕ್ಯುಮೆಂಟರಿ, ಜಾಹೀರಾತು, ಕಿರುಚಿತ್ರ ಪ್ರದರ್ಶನ) ನಡೆಯಲಿದೆ. ಜಿಪಂ ಸಿಇಒ ಡಾ.ಸೆಲ್ವಮಣಿ ಮತ್ತಿತರರು ಉಪಸ್ಥಿತರಿದ್ದರು.