ಪ್ರಾಣಿಜನ್ಯ ರೋಗದ ಬಗ್ಗೆ ಅರಿವು ಅಗತ್ಯ: ದಿನಕರ ಬಾಬು
ಉಡುಪಿ, ಸೆ.17: ಪ್ರಾಣಿಗಳಿಂದ ಹರಡುವ ರೋಗಗಳ ಬಗ್ಗೆ ಗ್ರಾಮೀಣ ಜನತೆಗೆ ಅರಿವು ಮೂಡಿಸುವ ಕೆಲಸವನ್ನು ಆರೋಗ್ಯ ಇಲಾಖೆ ಮತ್ತು ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ಅಗತ್ಯವಾಗಿ ಮಾಡಬೇಕು ಎಂದು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯತ್, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹ ಯೋಗದೊಂದಿಗೆ ಮಣಿಪಾಲ ರಜತಾದ್ರಿಯ ಜಿಪಂ ಡಾ.ವಿ.ಎಸ್ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ಪ್ರಾಣಿಜನ್ಯ ರೋಗಗಳ ಬಗ್ಗೆ ಮಾಹಿತಿ ನೀಡುವ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಗ್ರಾಮೀಣ ಭಾಗದ ಜನತೆಗೆ ಪ್ರಾಣಿಜನ್ಯ ರೋಗಗಳ ಬಗ್ಗೆ ಕಲ್ಪನೆಯೂ ಇಲ್ಲ. ಯಾವ ಪ್ರಾಣಿಯಿಂದ ಯಾವ ರೋಗ ಹರಡುತ್ತದೆ ಎಂಬ ಅರಿವು ಇಲ್ಲ. ಆದುದರಿಂದ ಈ ರೀತಿಯ ಕಾರ್ಯಾಗಾರಗಳು ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಆಯೋಜಿಸಬೇಕು. ಆರೋಗ್ಯ ಇಲಾಖೆ ಮತ್ತುಪಶುಪಾಲನೆ ಇಲಾಖೆಗಳು ಜಂಟಿಯಾಗಿ ಕೆಳಹಂತದವರೆಗೂ ಈ ರೋಗಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಆರೋಗ್ಯ ಮತ್ತು ಪಶುಪಾಲನಾ ಇಲಾಖೆಗಳ ವೈದ್ಯಾಧಿಕಾರಿಗಳು ಒಮ್ಮತದಿಂದ ಕಾರ್ಯಾಗಾರ ನಡೆಸಿ, ಮಾಹಿತಿ ವಿನಿಮಯದೊಂದಿಗೆ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ಬಹಳಷ್ಟು ಕಾಯಿಲೆ ಪ್ರಾಣಿಗಳಿಂದ ಬರುತ್ತಿವೆ ಎಂಬ ಅರಿವು ಇಲ್ಲದೆ ರೋಗ ಪತ್ತೆ ಹಚ್ಚುವಿಕೆಯಲ್ಲಿ ತೊಡಕುಂಟಾಗುತ್ತಿದೆ. ಇಂತಹ ಕಾರ್ಯಕ್ರಮಗಳಿಂದ ಹಳ್ಳಿ ಜನರಿಗೂ ಪ್ರಾಣಿಜನ್ಯ ರೋಗಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿನ ವಿದೇಶೀ ತಳಿ ಹಸುಗಳು ತುಂಬಾ ಕೋಮಲಕಾಯವಾಗಿದ್ದು, ಇವುಗಳಿಗೆ ರೋಗಗಳು ಬೇಗ ಬಾಧಿಸು ತ್ತದೆ. ಅಂತಹ ಹಸುವಿನ ಹಾಲು ಕುಡಿಯುವುದರಿಂದ ಖಾಯಿಲೆ ಹರಡುವ ಸಾಧ್ಯತೆಗಳ ಬಗ್ಗೆ ಸಂಶೋಧನೆ ನಡೆಸಿ, ಅದರ ಮಾಹಿತಿಗಳು ಜನರಿಗೆ ತಲುಪುವಂತಾಗಬೇಕು ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶೋಕ್ ಉಪಸ್ಥಿತರಿ ದ್ದರು. ಬೆಂಗಳೂರಿನ ಪಶುವೈದ್ಯ ಕಾಲೇಜಿನ ಸೂಕ್ಷ್ಮಜೀವ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಶ್ರೀಕೃಷ್ಣ ಇಸ್ಲೂರು, ಮಂಗಳೂರಿನ ಪ್ರಾದೇಶಿಕ ಸಂಶೋಧನಾ ಕಚೇರಿಯ ಅಧಿಕಾರಿ ಡಾ.ವಸಂತ್ ಕುಮಾರ್ ಶೆಟ್ಟಿ, ಮಣಿಪಾಲದ ಸಮು ದಾಯ ಔಷಧ ವಿಭಾಗದ ಹೆಚ್ಚುವರಿ ಪ್ರೊ.ಡಾ.ಅಶ್ವಿನಿ ಕುಮಾರ್ ಉಪನ್ಯಾಸ ನೀಡಿದರು.
ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆಯ ಉಪನಿರ್ದೇಶಕ ಡಾ. ಸರ್ವೋತತಿಮ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಪಶು ವೈದ್ಯಾಧಿಕಾರಿ ಬಾಬಣ್ಣ ಪೂಜಾರಿ ಸ್ವಾಗತಿಸಿದರು. ಆರೋಗ್ಯ ಮೇಲ್ವಿಚಾರಕ ಆನಂದ ಗೌಡ ವಂದಿಸಿದರು. ಪಶುವೈದ್ಯ ಡಾ.ಉದಯ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.