‘ಸ್ವರಕುಡ್ಲ- ಸೀಸನ್ 2’ ಧ್ವನಿ ಪರೀಕ್ಷೆ ಕಾರ್ಯಕ್ರಮ
ಮಂಗಳೂರು, ಸೆ.19: ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದ.ಕ ಮತ್ತು ಉಡುಪಿ ಇದರ 12ನೇ ವಾರ್ಷಿಕೋತ್ಸವದ ಸಲುವಾಗಿ ‘ಸ್ವರಕುಡ್ಲ- ಸೀಸನ್ 2’ ಧ್ವನಿ ಪರೀಕ್ಷೆ ಕಾರ್ಯಕ್ರಮವು ನಗರದ ಡಾನ್ ಬಾಸ್ಕೋ ಆಡಿಟೋರಿಯಂನಲ್ಲಿ ಬುಧವಾರ ನಡೆಯಿತು.
ಹೊಸ ಪ್ರತಿಭೆಗಳನ್ನು ಗುರುತಿಸುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಇಂಜಿನಿಯರ್ ಹಾಗೂ ಸ್ಮಾರ್ಟ್ ಸಿಟಿ ಪ್ರಧಾನ ವ್ಯವಸ್ಥಾಪಕ ಅರುಣ್ ಪ್ರಭಾ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಮಂಗಳ ಮ್ಯೂಸಿಕ್ ಕ್ಲಬ್ ಸ್ಥಾಪಕ ವಿಮಲ್ ಕೀರ್ತಿ ಜೈನ್ ಉಪಸ್ಥಿತರಿದ್ದರು.
ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಜಗದೀಶ್ ಶೆಟ್ಟಿ, ಮುರಳೀಧರ ಕಾಮತ್, ಮಲ್ಲಿಕಾ ಶೆಟ್ಟಿ, ನವಗಿರಿ ಗಣೇಶ್, ದಾಮೋದರ್ ಭಾಗವತ್, ಉಪಾಧ್ಯಕ್ಷ ವಿದ್ಯಾ ಕಾಮತ್, ಕೋಶಾಧಿಕಾರಿ ಐವನ್ ರಿಚರ್ಡ್ ಡಿಸೋಜ, ಪದಾಧಿಕಾರಿಗಳಾದ ರಂಜನ್ ದಾಸ್, ಶರತ್ ಉಚ್ಚಿಲ, ಸುಭಾಶಿತ್, ವಿದ್ಯಾ ಸುವರ್ಣ, ಗುರುಪ್ರಿಯ ನಾಯಕ್, ದಿನಕರ್, ಧನುರಾಜ್, ಸಂತೋಷ್ ಅಂಚನ್, ಸುರೇಶ್ ಶೆಟ್ಟಿ, ಸಂಚಾಲಕರಾದ ಮೋಹನ್ ಪ್ರಸಾದ್ ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ಪ್ರಸಿದ್ಧ ಕಲಾವಿದರಾದ ಶ್ರೀನಿವಾಸ ಭಾಗವತ್, ದಿನೇಶ್ ಕಿನ್ನಿಗೋಳಿ ಹಾಗೂ ಪ್ರಕಾಶ್ ಮಹಾದೇವನ್ ಸಹಕರಿಸಿದರು.
ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಘಟನಾ ಕಾರ್ಯಧರ್ಶಿ ಕೃಷ್ಣ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರಮೇಶ್ ಸಾಲ್ಯಾನ್ ವಂದಿಸಿದರು.