15 ಕೋ.ರೂ.ವೆಚ್ಚದಲ್ಲಿ ನಗರ ಸೌಂದರ್ಯಕರಣ ಕಾಮಗಾರಿ: ಶಾಸಕ ರಾಜೇಶ್ ನಾಯ್ಕ್
ಅ. 21ರಂದು ಬಿ.ಸಿ.ರೋಡ್ನಲ್ಲಿ ಚಾಲನೆ
ಬಂಟ್ವಾಳ, ಸೆ. 21: ಮಹತ್ವಾಕಾಂಕ್ಷೆಯ ಬಿ.ಸಿ.ರೋಡ್ನಲ್ಲಿ 15 ಕೋ.ರೂ.ವೆಚ್ಚದಲ್ಲಿ ನಗರ ಸೌಂದರ್ಯಕರಣದ ಕಾಮಗಾರಿಗೆ ಅ. 21ರಂದು ಚಾಲನೆ ನೀಡಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.
ಶನಿವಾರ ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸಂಸದ ನಳಿನ್ ಕುಮಾರ್ ಕಟೀಲ್ ಅವರ ಉಪಸ್ಥಿತಿಯಲ್ಲಿ ಮಂಗಳೂರಿನ ಸಕ್ಯೂ9ಟ್ ಹೌಸ್ನಲ್ಲಿ ವಿವಿಧ ಕಂಪೆನಿಗಳ ಪ್ರಮುಖರು, ಅಧಿಕಾರಿಗಳ ಅಂತಿಮ ಸಭೆ ನಡೆಸಲಾಗಿದ್ದು, ಸೌಂದರ್ಯ ಕರಣದ ನೀಲನಕಾಶೆಯನ್ನುಅಂತಿಮಗೊಳಿಸಲಾಗಿ, ಕಾಮಗಾರಿ ಆರಂಭಕ್ಕು ದಿನ ನಿಗದಿಪಡಿಸಲಾಗಿದೆ ಎಂದರು.
ಸಹಾಯಕ ಆಯುಕ್ತರಾದ ರವಿಚಂದ್ರ ನಾಯಕ್, ವಿನ್ಯಾಸಗಾರ ಧರ್ಮರಾಜ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಪಿಡಬ್ಲ್ಯುಡಿ, ಮೆಸ್ಕಾಂ, ವಿವಿಧ ಇಲಾಖೆಯ ಅಧಿಕಾರಿಗಳ ಸಹಿತ ಯೋಜನೆಗೆ ಸಿಎಸ್ಆರ್ ನಿಧಿ ವಿನಿಯೋಗಿಸುವ ಸಂಸ್ಥೆಗಳಾದ ಎಂಆರ್ಪಿಎಲ್, ಎನ್ಎಂಪಿಟಿಯ ಪ್ರತಿನಿಧಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ಶಾಸಕ ರಾಜೇಶ್ ನಾಯ್ಕ್ ವಿವರಿಸಿದರು.
ಮುಖ್ಯಮಂತ್ರಿಯವರು 5 ಕೋಟಿ ರೂ. ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಿದ್ದು, ಸಿಎಸ್ಆರ್ ನಿಧಿಯಿಂದ 10 ಕೋ.ರೂ. ಈ ಯೋಜನೆಗೆ ವಿನಿಯೋಗಿಸಲಾಗುತ್ತದೆ. ಹಾಗೆಯೇ ಶಶಿಕಿರಣ್ ಶೆಟ್ಟಿ, ಜಗನ್ನಾಥ ಶೆಣೈ, ಸಂತೋಷ್ ಪೂಜಾರಿ, ಬಿ.ಎ.ಮೊಯ್ದಿನ್, ಜೆರ್ರಿ ಕತಾರ್ ಈ ಐವರು ಪ್ರಮುಖರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಜನರ ಸಹಭಾಗಿತ್ವದಲ್ಲಿ ಕಾಮಗಾರಿ ನಡೆಯಲಿದೆ ಎಂದವರು ತಿಳಿಸಿದರು.
ರಾ.ಹೆ.ಅಧಿಕಾರಿಗಳಿಗೆ ಸೂಚನೆ:
ದಿನವೊಂದಕ್ಕೆ ಲಕ್ಷಾಂತರಮಂದಿ ಜನರು ಬಿ.ಸಿ.ರೋಡ್ಗೆ ಅಗಮಿಸುತ್ತಿರುವುದರಿಂದ ಸ್ವಚ್ಛ ಮತ್ತು ಸುಂದರನಗರವನ್ನಾಗಿಸುವ ಸಂದರ್ಭದಲ್ಲಿ ಬೆರಳೆಣಿಕೆ ಮಂದಿಗೆ ಅಡಚಣೆಯಾಗುವ ಸಾಧ್ಯತೆ ಇರುವುದರಿಂದ ಜನರು ಸಹಕರಿಸುವಂತೆ ಶಾಸಕರು ಕೋರಿದರು. ಮಳೆ ನಿಂತ ತಕ್ಷಣ ಹೆದ್ದಾರಿಯನ್ನು ದುರಸ್ಥಿಗೊಳಿಸುವ ಕಾರ್ಯ ನಡೆಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಸಭೆಯಲ್ಲಿ ಹಾಜರಿದ್ದ ರಾ.ಹೆ.ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಪುರಸಭಾ ಸದಸ್ಯ ಗೋವಿಂದ ಪ್ರಭು, ಜಿಲ್ಲಾಉಪಾಧ್ಯಕ್ಷ ಜಿ.ಆನಂದ, ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ, ಕ್ಷೇತ್ರ ಸಮಿತಿ ಪ್ರ.ಕಾರ್ಯದರ್ಶಿಗಳಾದ ರಾಮದಾಸ್, ಮೋನಪ್ಪದೇವಸ್ಯ, ಉಪಾಧ್ಯಕ್ಷ ದೇವಪ್ಪ ಪೂಜಾರಿ, ರಮಾನಾಥ ರಾಯಿ,ಪುರುಷೋತ್ತಮ ಶೆಟ್ಟಿ ವಾಮದಪದವು ಮೊದಲಾದವರಿದ್ದರು.
ಯೋಜನೆಯಲ್ಲಿ ಏನೇನಿದೆ?:
ಬಿ.ಸಿ.ರೋಡಿನ ಕೈಕಂಬದಿಂದ ಬಹ್ರಶ್ರೀ ನಾರಾಯಣಗುರು ವೃತ್ತದವರೆಗೆ ಸೌಂದರ್ಯಕರಣಗೊಳಿಸಲಾಗುತ್ತಿದ್ದು, ಸಿಸಿಟಿವಿ,ಬೀದಿದೀಪ ಅಳವಡಿಕೆ, ಒಳಚರಂಡಿ, ಬಸ್ ತಂಗುದಾಣ, ಕೆಎಸ್ಸಾರ್ಟಿಸಿ ಬಸ್ ತಂಗುದಾಣದ ಮುಂಭಾಗ ವೃತ್ತ ನಿರ್ಮಾಣ,ಪ್ಲೈಒವರ್ ಅಡಿಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಸಾರ್ವಜನಿಕ ಶೌಚಾಲಯ, ಹೂದೋಟ, ಕೈಕುಂಜ ಪ್ರದೇಶದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ, ಟ್ರಾಫಿಕ್ ಪೊಲೀಸ್ ಠಾಣೆ ಮೊದಲಾದ ಅಭಿವೃದ್ಧಿ ಕಾರ್ಯಗಳು ಈ ಯೋಜನೆಯಲ್ಲಿ ಒಳಗೊಂಡಿದೆ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದ್ದಾರೆ.