'ಮಾಂಡವಿ ಟೈಮ್ಸ್ ಸ್ಕ್ವೇರ್' ಬಿಸಿನೆಸ್-ಶಾಪಿಂಗ್ ಸೆಂಟರ್ ಯೋಜನೆಗೆ ಚಾಲನೆ
ಉಡುಪಿ, ಸೆ.21: ಧರ್ಮ ಎಂಬುದು ಕೇವಲ ದೇವಸ್ಥಾನದಲ್ಲಿ ಪೂಜೆ, ಪಾರ್ಥನೆ ಮಾಡುವುದು ಮಾತ್ರ ಅಲ್ಲ. ಸೇವಾದೃಷ್ಠಿ ಹಾಗೂ ಪ್ರಾಮಾಣಿಕತೆಯಿಂದ ಜೀವನಕ್ಕಾಗಿ ಮಾಡುವ ವ್ಯಾಪಾರ ಕೂಡ ಭಗವಂತನ ಪೂಜೆಯಾಗಿದೆ ಎಂದು ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿಯ ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ಸ್ನಿಂದ ಕಲ್ಸಂಕ ರಾಯಲ್ ಗಾರ್ಡನ್ಸ್ನಲ್ಲಿ ನಿರ್ಮಾಣಗೊಳ್ಳಲಿರುವ 'ಮಾಂಡವಿ ಟೈಮ್ಸ್ ಸ್ಕ್ವೇರ್' ಇಂಟಿಗ್ರೇಟೆಡ್ ಬಿಸಿನೆಸ್ ಆ್ಯಂಡ್ ಶಾಪಿಂಗ್ ಸೆಂಟರ್ ಯೋಜನೆ ಯ ಅನಾವರಣ ಸಮಾರಂಭವನ್ನು ಶನಿವಾರ ರಾಯಲ್ ಗಾರ್ಡನ್ಸ್ನಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವ್ಯಾಪಾರದಲ್ಲಿ ಧರ್ಮ ಇರಬೇಕು. ಆದರೆ ಧರ್ಮದಲ್ಲಿ ವ್ಯಾಪಾರ ಬರಬಾರದು. ಅದೇ ರೀತಿ ರಾಜಕಾರಣದಲ್ಲಿ ಧರ್ಮ ಇರಬೇಕೆ ಹೊರತು ಧರ್ಮದಲ್ಲಿ ರಾಜಕಾರಣ ಇರಬಾರದು. ಆದರೆ ಇಂದು ಧರ್ಮದಲ್ಲಿ ವ್ಯಾಪಾರ ಹಾಗೂ ರಾಜಕಾರಣ ಸೇರಿಕೊಂಡಿದೆ ಎಂದು ಅವರು ಖೇಧ ವ್ಯಕ್ತಪಡಿಸಿದರು.
ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ, ಮಂಗಳೂರಿನ ರೆ.ಫಾ.ಗಾಡ್ಫ್ರೇ ಸಾಲ್ದಾನ, ಉಡುಪಿ ಶೋಕಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ರೆ.ಫಾ.ವಲೇರಿಯನ್ ಮೆಂಡೋನ್ಸಾ, ಕಲ್ಯಾಣಪುರ ಮೌಂಟ್ ರೊಸರಿ ಚರ್ಚ್ನ ಪ್ರಧಾನ ಧರ್ಮಗುರು ರೆ.ಫಾ.ಲೆಸ್ಲಿ ಕ್ಲಿಫರ್ಡ್ ಡಿಸೋಜ, ಸಹಾಯಕ ಧರ್ಮಗುರು ಫಾ.ಅಂತೋನಿ ಕ್ಲಾನಿ ಡಿಸೋಜ ಆಶೀರ್ವಚನ ನೀಡಿದರು.
ಉಡುಪಿ ಶಾಸಕ ಕೆ.ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಗರಸಭೆ ಸದಸ್ಯೆ ಗೀತಾ ಶೇಟ್, ಮಣಿಪಾಲ ಮಿಡಿಯಾ ನೆಟ್ವರ್ಕ್ನ ಆಡಳಿತ ನಿರ್ದೇಶಕ ಸತೀಶ್ ಯು.ಪೈ, ತರಂಗ ಸಂಪಾದಕಿ ಸಂಧ್ಯಾ ಎಸ್.ಪೈ, ಉದ್ಯಮಿ ರತ್ನಾಕರ ಶೆಟ್ಟಿ, ಸರಿಕಾ ರತ್ನಾಕರ ಶೆಟ್ಟಿ, ಉದ್ಯಮಿ ಗಳಾದ ಪುರುಷೋತ್ತಮ ಶೆಟ್ಟಿ, ಭುವನೇಂದ್ರ ಕಿದಿಯೂರು ಮುಖ್ಯ ಅತಿಥಿಗಳಾಗಿದ್ದರು.
ಡಾ.ಜೆರ್ರಿ ವಿನ್ಸೆಂಟ್ ಡಯಸ್ ಸ್ವಾಗತಿಸಿದರು. ಗ್ಲೇನ್ ಡಯಸ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಮರ್ಸಿ ಮರ್ಲಿನ್ ಡಯಸ್, ಜಾಸನ್ ಡಯಸ್, ಡಾ.ಲಾರಾ ಡಯಸ್ ಉಪಸ್ಥಿತರಿದ್ದರು. ಸತೀಶ್ ಕುಮಾರ್ಶೆಟ್ಟಿ ಕಾರ್ಯ ಕ್ರಮ ನಿರೂಪಿಸಿದರು.
2.5 ಎಕರೆ ಜಾಗದಲ್ಲಿ ನಿರ್ಮಾಣವಾಗಲಿರುವ ಈ ಸೆಂಟರ್ನಲ್ಲಿ ಶಾಪಿಂಗ್ ಮಾಲ್, ಹೊಟೇಲ್, ಬ್ಯಾಂಕ್ವೆಟ್, ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್ ಸೇರಿದಂತೆ ಎಲ್ಲ ಕ್ಷೇತ್ರಗಳ ಮಳಿಗೆಗಳು ಇರಲಿವೆ. ಅತ್ಯಾಧುನಿಕ ಸೌಲಭ್ಯ ಗಳೊಂದಿಗೆ 600 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣ ಹೊಂದಿರುವ 203 ಮಳಿಗೆಗಳು ಇದರಲ್ಲಿ ಇರಲಿವೆ. 300ಕ್ಕೂ ಅಧಿಕ ಕಾರುಗಳ ವ್ಯವಸ್ಥಿತ ಪಾರ್ಕಿಂಗ್ ಅವಕಾಶ ಕಲ್ಪಿಸಲಾಗಿದೆ.