ಡಾ.ಮಹಾಬಲೇಶ್ವರ ರಾವ್ಗೆ ವಿಶ್ವೇಶ್ವರಯ್ಯ ರಾ.ಸಾಹಿತ್ಯ ಪ್ರಶಸ್ತಿ
ಉಡುಪಿ, ಸೆ.21: ಬೆಂಗಳೂರಿನ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಕೊಡಮಾಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಉಡುಪಿಯ ಡಾ.ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ಸಮನ್ವಯಾಧಿಕಾರಿ ಡಾ.ವುಹಾಬಲೇಶ್ವರ ರಾವ್ ಆಯ್ಕೆಯಾಗಿದ್ದಾರೆ.
ಸೆ.25ರಂದು ಬುಧವಾರ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಪ್ರಶಸ್ತಿ ವಿತರಣೆ ಸಮಾರಂಭ ನಡೆಯಲಿದೆ. ಖ್ಯಾತ ಶಿಕ್ಷಣ ತಜ್ಞರಾಗಿರುವ ಡಾ. ಮಹಾಬಲೇಶ್ವರ ರಾವ್ ಮನೋವಿಜ್ಞಾನ, ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ, ಭಾಷಾ ಶಿಕ್ಷಣ, ಶಿಕ್ಷಕರ ಶಿಕ್ಷಣ, ಅನುವಾದ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿ ದಂತೆ ಇದುವೆಗೆ 135 ಕೃತಿಗಳನ್ನು ರಚಿಸಿದ್ದಾರೆ.
ಡಾ.ರಾವ್, ಕನ್ನಡ ಸಾಹಿತ್ಯ ಪರಿಷತ್ತಿನ ಡಾ.ಹಾ.ಮಾ.ನಾಯಕ್ ದತ್ತಿ ನಿಧಿ, ವಸುದೇವ ಭೂಪಾಲಂ ದತ್ತಿನಿಧಿ, ಡಾ.ಎಸ್ ಧರಣೇಂದ್ರಯ್ಯ ದತ್ತಿ ನಿಧಿ ಪುಸ್ತಕ ಪುರಸ್ಕಾರ, ಉಪಾಧ್ಯಾಯ ಸಂಮಾನ್ ರಾಜ್ಯ ಪುರಸ್ಕಾರ, ಗೊರೂರು ಪುರಸ್ಕಾರ ಹಾಗೂ ರೋಟರಿ ವ್ಯಕ್ತಿ ಶ್ರೇಷ್ಠತಾ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
1982ರಿಂದ ಉಡುಪಿಯ ಡಾ.ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದು, ಇದೀಗ ಸಮನ್ವಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತಿದ್ದಾರೆ.