ಗಡಿಯಾರ ಜಮಾಅತ್ ವಿರುದ್ಧದ ಅಪಪ್ರಚಾರಕ್ಕೆ ಖಂಡನೆ
ವಿಟ್ಲ, ಸೆ.21: ‘‘ಗಡಿಯಾರ ಪರಿಸರದಲ್ಲಿ ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣಕ್ಕೂ ಮಾಣಿ ರೇಂಜ್ ಜಮೀಯ್ಯತುಲ್ ಮುಅಲ್ಲಿಮೀನ್ ರೂಪೀಕರಣಕ್ಕೂ ಯಾವುದೇ ಸಂಬಂಧವಿಲ್ಲ. ಮಾಣಿ ರೇಂಜ್ ಜಮೀಯ್ಯತುಲ್ ಮುಅಲ್ಲಿ ಮೀನ್ ರಚನೆಗೆ ಗಡಿಯಾರ ಮದ್ರಸವನ್ನು ಆಹ್ವಾನಿಸಿಲ್ಲ’’ ಎಂದು ಮಾಣಿ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಇಸ್ಮಾಯೀಲ್ ದಾರಿಮಿ ಸೆ.19ರಂದು ಸುದ್ದಿಗೋಷ್ಠಿಯಲ್ಲಿ ನೀಡಿರುವ ಹೇಳಿಕೆ ಸುಳ್ಳು. ಈ ರೀತಿ ಗಡಿಯಾರ ಜಮಾಅತ್ ಸದಸ್ಯರನ್ನು ಅವಮಾನಿಸಿರುವುದು ಖಂಡನೀಯ ಎಂದು ಗಡಿಯಾರ ಮುಹಿಯುದ್ದೀನ್ ಜುಮಾ ಮಸ್ಜಿದ್ ಕಾರ್ಯದರ್ಶಿ ಅಬ್ದುಲ್ ಅಶ್ರಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇದೇ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಅಬ್ದುಲ್ ಮಜೀದ್ ದಾರಿಮಿ ನೂತನವಾಗಿ ರಚನೆಯಾಗುವ ರೇಂಜ್ಗೆ ಸೇರ್ಪಡೆಗೊಳ್ಳುವಂತೆ ನಿರಂತರ ಒತ್ತಡ ಹೇರಿದ್ದಲ್ಲದೇ, ಈ ಕುರಿತಾದ ಸಭೆಗೆ ಆಗಮಿಸುವಂತೆ ಲಿಖಿತ ಆಹ್ವಾನ ಕೂಡಾ ನೀಡಿದ್ದರು. ಸುದ್ದಿಗೋಷ್ಠಿಯಲ್ಲಿದ್ದ ಇನ್ನೋರ್ವ ಮುಹಮ್ಮದ್ ಅಶ್ರಫ್ ಸೆ.15ರಂದು ಮಾಣಿ ರೇಂಜ್ಗೆ ಬೆಂಬಲವಾಗಿ ಗಡಿಯಾರ ಜಮಾಅತ್ನ ಬೆರಳಿಣಿಕೆಯ ಸದಸ್ಯರ ಸಹಿ ಸಂಗ್ರಹ ಮಾಡಿದ್ದಾರೆ ಎಂದವರು ಹೇಳಿದ್ದಾರೆ.
ಆದರೆ, ಮಾಣಿ ರೇಂಜ್ ರಚನೆಗೆ ಸಂಬಂಧಿಸಿ ಗಡಿಯಾರ ಜಮಾಅತ್ನ ಅಂಗೀಕಾರ ನೀಡುವ ಕುರಿತಂತೆ ನಿರ್ಧರಿಸಲು ಸೆ.15ರಂದು ಜಮಾಅತ್ ಆಡಳಿತ ಸಮಿತಿಯ ತುರ್ತು ಸಭೆ ಕರೆಯಲಾಗಿತ್ತು. ಸಭೆಗೆ ಅಲ್ಪ ಸಮಯ ಮೊದಲು ಮಸೀದಿ ವಠಾರಕ್ಕೆ ಆಗಮಿಸಿದ ಅಶ್ರಫ್ ಮತ್ತು ಮಜೀದ್ ದಾರಿಮಿ ತಮ್ಮ ಬೆಂಬಲಿಗರೊಂದಿಗೆ ತಮ್ಮ ನಿಲುವನ್ನು ಬೆಂಬಲಿಸದರೊಂದಿಗೆ ತೀವ್ರ ವಾಗ್ವಾದ ನಡೆಸಿದರು. ಬಳಿಕ ಪರ ಮತ್ತು ವಿರೋಧಿ ತಂಡಗಳ ವಾಗ್ವಾದದ ಹಿನ್ನೆಲೆ ಯಲ್ಲಿ ಸಭೆ ರದ್ದುಗೊಂಡಿು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇದೇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಗಡಿಯಾರ ಜಮಾಅತ್ನ ಮೇಲೆ ಸುಳ್ಳು ಹೇಳಿಕೆ ನೀಡಿದವರು ಬಹಿರಂಗ ಕ್ಷಮೆ ಯಾಚಿಸಬೇಕು. ಅಥವಾ ಅವರ ಹೇಳಿಕೆ ನಿಜ ಎನ್ನುವುದಾದರೆ ಗಡಿಯಾರ ಮಸೀದಿ ಅಥವಾ ಯಾವುದೇ ಪುಣ್ಯ ಸ್ಥಳದಲ್ಲಿ ಪ್ರಮಾಣ ಮಾಡುವಂತೆ ಬಹಿರಂಗ ಆಹ್ವಾನವನ್ನು ನೀಡುತ್ತಿದ್ದೇವೆ ಎಂದು ಅಬ್ದುಲ್ ಅಶ್ರಫ್ ಪ್ರಟಕನೆಯಲ್ಲಿ ತಿಳಿಸಿದ್ದಾರೆ.