ಇಂದ್ರಾಣಿ ಉಳಿಸಿ ಹೋರಾಟ: ಜನಜಾಗೃತಿ ಅಭಿಯಾನ -ಮಾಲಿನ್ಯ ಸಮೀಕ್ಷೆ
ಉಡುಪಿ, ಸೆ.22: ಉಡುಪಿಯ ಜೀವನದಿ ಇಂದ್ರಾಣಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಇಂದ್ರಾಣಿ ಉಳಿಸಿ ಹೋರಾಟದ ಪ್ರಯುಕ್ತ ರವಿವಾರ ಉಡುಪಿಯಲ್ಲಿ ಜನಜಾಗೃತಿ ಅಭಿಯಾನ ಮತ್ತು ಮಾಲಿನ್ಯ ಸಮೀಕ್ಷೆ ಕಾರ್ಯ ನಡೆಯಿತು.
ಈ ಅಭಿಯಾನದಲ್ಲಿ ನದಿಯ ಇಕ್ಕೆಲಗಳಲ್ಲಿರುವ ಶಾರದಾ ಕಲ್ಯಾಣ ಮಂಟಪ, ಬೈಲಕೆರೆ ,ಕಲ್ಸಂಕ, ಬಡಗು ಪೇಟೆ, ಮತ್ತು ಮಠದಬೆಟ್ಟು ಪರಿಸರದ ನೂರಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಜಲಮಾಲಿನ್ಯದಿಂದ ಉಂಟಾಗಿ ರುವ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು.
ಇಂದ್ರಾಣಿ ಉಳಿಸಿ ಹೋರಾಟ ಸಮಿತಿಯ ಜೊತೆ ಸರಕಾರಿ ಮಣಿಪಾಲ ಪಾಲಿಟೆಕ್ನಿಕ್ ಕಾಲೇಜು ಮತ್ತು ಉಡುಪಿ ವೈಕುಂಠ ಬಾಳಿಗ ಕಾನೂನು ವಿದ್ಯಾ ಲಯದ ವಿದ್ಯಾರ್ಥಿಗಳು ಕೈಜೋಡಿಸಿದ್ದರು. ಅಲ್ಲದೆ ಸ್ಟಿಕ್ಕರ್ ಮತ್ತು ಕರಪತ್ರ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶೌಚಾಲಯಗಳ ತ್ಯಾಜ್ಯ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವ ನಗರಸಭೆಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನದಿಯ ಪರಿಸರದಲ್ಲಿ ಕೇವಲ ಕಲ್ಸಂಕ ಮತ್ತು ಮಠದಬೆಟ್ಟು ಬಳಿ ಐವತ್ತು ಬಾವಿಗಳ ನೀರು ಕುಡಿಯಲು ಅಯೋಗ್ಯವಾಗಿವೆ. ಕೆಲವು ಬಾವಿಗಳ ನೀರು ಅಸಾಧ್ಯ ವಾಸನೆಯಿಂದ ಕೂಡಿದ್ದು ಜನ ನಿತ್ಯೋಪಯೋಗಕ್ಕೂ ಈ ನೀರು ಬಳಸಲು ಹಿಂಜರಿಯುತ್ತಿದ್ದಾರೆ ಎಂದು ಸ್ಥಳೀಯರು ದೂರಿದರು.
ಮಾನವ ಹಕ್ಕುಗಳ ಹಿರಿಯ ಹೋರಾಟಗಾರ ರವೀಂದ್ರನಾಥ ಶಾನು ಭೋಗ್, ನಗರಸಭಾ ಸದಸ್ಯ ಗಿರೀಶ್ ಅಂಚನ್, ರಾಷ್ಟ್ರೀಯ ಸೇವಾ ಯೋಜನೆಯ ಶಿವಪ್ರಸಾದ್ ಶೆಟ್ಟಿ ಅಂಬಲಪಾಡಿ, ಎಸ್.ಇ. ಕೃಷ್ಣಯ್ಯ, ಸಂವೇದನಾ ಫೌಂಡೇಶನ್ ಸ್ಥಾಪಕ ಪ್ರಕಾಶ್ ಮಲ್ಪೆ, ಇಂದ್ರಾಣಿ ಉಳಿಸಿ ಅಭಿಯಾನದ ಸಂಚಾಲಕ ಶ್ರೀಕಾಂತ್ ಶೆಟ್ಟಿ ಕಾರ್ಕಳ, ಶಶಾಂಕ್ ಶಿವತ್ತಾಯ, ಉದಯ್ ಮಠದಬೆಟ್ಟು, ಆನಂದ್ ಮಠದಬೆಟ್ಟು, ಶೈಲೇಂದ್ರ ಶೆಟ್ಟಿ, ನಿತೇಶ್ ರಾವ್, ರಕ್ಷಿತ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.