ಕೋಟೆಕಾರ್: ರಕ್ತದಾನ, ವೈದ್ಯಕೀಯ ಹಾಗೂ ದಂತ ಚಿಕಿತ್ಸಾ ಶಿಬಿರ
ಕೋಟೆಕಾರ್, ಸೆ. 22: ಮಾಡೂರು ಫ್ರೆಂಡ್ಸ್ ಮತ್ತು ಮಝ್ದಕ್ ಫ್ರೆಂಡ್ಸ್ ಮಾಡೂರು ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಜಂಟಿ ಸಹಭಾಗಿತ್ವದಲ್ಲಿ ಯೆನಪೋಯ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇದರ ಸಹಯೋಗದೊಂದಿಗೆ 'ಬೃಹತ್ ರಕ್ತದಾನ ಶಿಬಿರ, ವೈದ್ಯಕೀಯ ಶಿಬಿರ ಹಾಗೂ ದಂತ ಚಿಕಿತ್ಸಾ ಶಿಬಿರ'ವು ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಡೂರು, ಕೋಟೆಕಾರ್ ನಲ್ಲಿ ಯಶಸ್ವಿಯಾಗಿ ನಡೆಯಿತು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಳ್ಳಾಲ ಮದನಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ಇಸ್ಮಾಯಿಲ್ ಟಿ. ಅವರು ಮಾನವೀಯ ಮೌಲ್ಯಗಳಿಗೆ ಸ್ಪಂದಿಸುವ ಯುವ ಮನಸ್ಸುಗಳಿಗೆ ಜಾತಿ-ಧರ್ಮ ಅಡಚಣೆಯಾಗದಿರಲು ಕಾರಣವೇ ಇಂತಹ ಸೌಹಾರ್ದ ರಕ್ತದಾನ ಶಿಬಿರಗಳು. ಪ್ರತಿಯೊಂದು ಧರ್ಮವು ಮಾನವೀಯತೆಯನ್ನೇ ಕಲಿಸಿದೆ. ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯು ಕೇವಲ ರಕ್ತದಾನಗಳಿಗೆ ಮಾತ್ರ ಸೀಮಿತಗೊಳ್ಳದೆ ನೆರೆ ಸಂತ್ರಸ್ತರಿಗೆ ನೆರವಾಗಿ, ಆಸ್ಪತ್ರೆಯಲ್ಲಿರುವ ರೋಗಿಗಳ ಪಾಲಿಗೆ ಆಶಾಕಿರಣವಾಗುತ್ತಾ ಬಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಡೂರು ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಐಸಾಬಿ ಮಾತನಾಡಿ, ಮಾಡೂರಿನ ಸೌಹಾರ್ದತೆ ಇತರ ಎಲ್ಲಾ ಊರುಗಳಿಗೂ ಮಾದರಿಯಾಗಲಿ ಎಂದು ತಿಳಿಸಿದರು.
ಶೈಕ್ಷಣಿಕ ಕ್ಷೇತ್ರದಲ್ಲಿನ ಗಣನೀಯ ಸಾಧನೆಗಾಗಿ ಮದನಿ ಪಿ ಯು ಕಾಲೇಜ್ ನ ಪ್ರಾಂಶುಂಪಾಲರಾದ ಇಸ್ಮಾಯಿಲ್ ಟಿ. ಹಾಗೂ ಸರಕಾರಿ ಹಿ.ಪ್ರಾ. ಶಾಲೆಯ ಮಾಡೂರು ಇದರ ಮುಖ್ಯಗುರುಗಳಾಗಿರುವ ಶ್ರೀಮತಿ ಐಸಾಬಿ ಮೇಡಂ ಇವರಿಗೆ ಆಯೋಜಕರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತಾ ಶ್ರೀ ಬಿಲ್ಡರ್ಸ್ ಮಾಲಕರಾಗಿರುವ ಸುರೇಶ್ ಕೆ ಪಿ, ಶ್ರೀದೇವಿ ಕಾಂಟ್ರಾಕ್ಟರ್ಸ್ ಮಾಲಕರಾದ ಬಾಲಕೃಷ್ಣ ಅಮೀನ್, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ಶೀಲಾವತಿ, ಸಿವಿಲ್ ಕಾಂಟ್ರಾಕ್ಟರ್ ಸಲಾಂ ಎ.ಕೆ., ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ, ಬಿಜೆಪಿ ಯುವ ಮೋರ್ಛಾ ಮಂಗಳೂರು ಅಧ್ಯಕ್ಷರಾಗಿರುವ ಸುಜಿತ್ ಮಾಡೂರು, ಎಂ ವೈ ಎಫ್ ಅಧ್ಯಕ್ಷರಾದ ಬಶೀರ್, ಶಬರಿ ಫ್ರೆಂಡ್ಸ್ ನ ಅಧ್ಯಕ್ಷರಾದ ನವೀನ್ ಕೆ, ಬ್ಲಡ್ ಡೋನರ್ಸ್ ಮಂಗಳೂರು(ರಿ) ಕಾರ್ಯದರ್ಶಿಗಳಾದ ನವಾಝ್ ಕಲ್ಲರಕೋಡಿ, ಸಮಾಜ ಸೇವಕರಾದ ಅಬ್ದುಲ್ ರಹೀಂ ಕಾಚಾರ್, ಕೋಯ ಮಾಡೂರು, ಮೊಯಿದಿನ್ ಹಸನ್, ಮಝ್ದಕ್ ಫ್ರೆಂಡ್ಸ್ ಅಧ್ಯಕ್ಷರಾದ ತಂಝೀಲ್, ಬ್ಲಡ್ ಡೋನರ್ಸ್ ಮಂಗಳೂರು(ರಿ) ಕಾರ್ಯ ನಿರ್ವಾಹಕರುಗಳಾದ ಸಲಾಂ ಚೊಂಬುಗುಡ್ಡೆ, ಮುನೀರ್ ಚೆಂಬುಗುಡ್ಡೆ, ಫಾರೂಕ್ ಬಿಗ್ ಗ್ಯಾರೇಜ್, ಸಿರಾಜ್ ಪಜೀರ್, ಅಲ್ತಾಫ್ ಉಳ್ಳಾಲ, ಹಮೀದ್ ಪಜೀರ್ ಉಪಸ್ಥಿತರಿದ್ದರು.
ಪಂಚಾಯತ್ ಸದಸ್ಯರಾದ ಹಮೀದ್ ಹಸನ್ ಸ್ವಾಗತಿಸಿದರು. ಬ್ಲಡ್ ಡೋನರ್ಸ್ ಮಂಗಳೂರು(ರಿ) ಕೋಶಾಧಿಕಾರಿ ಫಯಾಝ್ ಮಾಡೂರು ವಂದಿಸಿದರು. ಬ್ಲಡ್ ಡೋನರ್ಸ್ ಮಂಗಳೂರು(ರಿ) ಕಾರ್ಯ ನಿರ್ವಾಹಕರಾದ ರಝಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.