ಸೌಹಾರ್ದೆಯ ಮೂಲಕ ಗಂಗೊಳ್ಳಿಯ ಕೋಮು ಸೂಕ್ಷ್ಮ ಪ್ರದೇಶ ಹಣೆಪಟ್ಟಿಯನ್ನು ಅಳಿಸಿ: ಎಎಸ್ಪಿ
ಗಂಗೊಳ್ಳಿ, ಸೆ.27: ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮುಂದೆ ನಡೆಯುವ ಶಾರದೋತ್ಸವ ಪುರ ಮೆರವಣಿಗೆಯ ಹಿನ್ನೆಲೆಯಲ್ಲಿ ತ್ರಾಸಿ ಅಣ್ಣಪ್ಪಯ್ಯ ಸಭಾ ಭವನದಲ್ಲಿ ಇಂದು ಶಾಂತಿ ಸಭೆಯನ್ನು ಕರೆಯಲಾಗಿತ್ತು.
ಕುಂದಾಪುರ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಮಾತನಾಡಿ, ಕೋಮು ಸೌಹಾರ್ದತೆಯ ಮೂಲಕ ಗಂಗೊಳ್ಳಿಗೆ ಅಂಟಿ ಕೊಂಡಿರುವ ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿಯನ್ನು ಸಾರ್ವಜನಿಕರು ಮನಸ್ಸು ಮಾಡಿ ತೆಗೆದು ಹಾಕಬೇಕು. ಇದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ವನ್ನು ಪೊಲೀಸ್ ಇಲಾಖೆ ಯಿಂದ ನೀಡಲಾಗುವುದು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಪೊಲೀಸ್ ಸಹಭಾಗಿತ್ವದೊಂದಿಗೆ ಗಂಗೊಳ್ಳಿಯಲ್ಲಿ ಕ್ರೀಡೆ ಸಹಿತ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಪ್ರತಿ ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ವಿಶೇಷವಾಗಿ ಗಂಗೊಳ್ಳಿಗೆ ಭೇಟಿ ನೀಡಿ ಜನರ ಕುಂದುಕೊರತೆಗಳನ್ನು ಖುದ್ದಾಗಿ ಆಲಿಸಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸುರೇಶ್ ನಾಯ್ಕ್, ಗಂಗೊಳ್ಳಿ ಠಾಣಾಧಿಕಾರಿ ವಾಸಪ್ಪನಾಯ್ಕ್, ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಮುಖಂಡರು ಹಾಜರಿದ್ದರು. ಠಾಣಾ ಹೆಡ್ಕಾನ್ಸ್ಟೇಬಲ್ ರವಿಚಂದ್ರ ಮೆರವಣಿಗೆ ಸಂದರ್ಭ ಪಾಲಿಸಬೇಕಾದ ಇಲಾಖಾ ನಿಯಮ ಗಳನ್ನು ವಾಚಿಸಿದರು.