ಬಂದೂಕಿನ ತೋಟೆ ಬಿದ್ದು ಸಿಡಿತ: ಇಬ್ಬರಿಗೆ ಗಾಯ
ಈಶ್ವರಮಂಗಲ : ಬಂದೂಕಿನ ತೋಟೆ ಆಕಸ್ಮಿಕವಾಗಿ ಬಿದ್ದು ಸಿಡಿದ ಪರಿಣಾಮವಾಗಿ ಇಬ್ಬರು ಯುವಕರು ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಎಣ್ಣೆಗದ್ದೆ ಎಂಬಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಪಾಣಾಜೆ ಗ್ರಾಮದ ಎಣ್ಣೆಗದ್ದೆ ನಿವಾಸಿ ಅಬ್ದುಲ್ ಅಝೀಝ್ ಎಂಬವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಅಬ್ದುಲ್ ಅಝೀಝ್ ಅವರು ಹೊಂದಿರುವ ಪರವಾನಿಗೆಯ ಬಂದೂಕಿನ ತೋಟೆ ಆಕಸ್ಮಿಕವಾಗಿ ಬಿದ್ದು ಸಿಡಿದಿತ್ತು. ಸಿಡಿದ ತೋಟೆಯ ಚಿಲ್ಲುಗಳು ಅಬ್ದುಲ್ ಅವರ ಪುತ್ರ ಸಿನಾನ್ (21) ಮತ್ತು ಪಕ್ಕದ ಮನೆಯ ಅಬೂಬಕ್ಕರ್ ಶಾಫಿ ಅವರ ಪುತ್ರ ಅಬ್ದುಲ್ ಖಲೀಲ್ (28) ಎಂಬವರ ಕೈ ಮತ್ತು ಕಾಲಿನ ಭಾಗಗಳಿಗೆ ತಾಗಿದ ಪರಿಣಾಮವಾಗಿ ಅವರಿಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬಂದೂಕು ಪರವಾನಿಗೆದಾರ ಅಬ್ದುಲ್ ಅಝೀಝ್ ಅವರು ಅಸುರಕ್ಷಿತ ರೀತಿಯಲ್ಲಿ ಬಂದೂಕಿನ ಗುಂಡುಗಳನ್ನು ಇಟ್ಟಿರುವುದು ಈ ಘಟನೆಗೆ ಕಾರಣ ಎಂಬ ಆರೋಪದಲ್ಲಿ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story