ಹೊಸಂಗಡಿ: ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ; ವರದಿಗಾರನ ಮೇಲೆ ಹಲ್ಲೆ
ಮಂಜೇಶ್ವರ : ಮಂಜೇಶ್ವರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರವೀಶ್ ತಂತ್ರಿ ಯನ್ನು ಆಯ್ಕೆ ಮಾಡಿರುವುದು ಮಂಜೇಶ್ವರ ಬಿಜೆಪಿ ಕಾರ್ಯಕರ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ತಂತ್ರಿಯನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿರುವುದರ ವಿರುದ್ಧ ಹೊಸಂಗಡಿಯಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಸಂಘಟನಾ ಕಾರ್ಯದರ್ಶಿ ಎಲ್ ಗಣೇಶ್ ರನ್ನು ಕಾರ್ಯಕರ್ತರ ಗುಂಪೊಂದು ಸುತ್ತುವರಿದು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಚುನಾವಣಾ ಸಭೆಗಳಿಗೆ ಸಹಕರಿಸುವುದಿಲ್ಲವೆಂದು ಕುಂಬಳೆ, ಮಂಜೇಶ್ವರ ರಾಜ್ಯ ಸಮಿತಿ ಹೇಳಿರುವುದಾಗಿ ತಿಳಿದು ಬಂದಿದೆ.
ಸಭಾಂಗಣದಲ್ಲಿ ಕಾರ್ಯದರ್ಶಿ ಎಲ್. ಗಣೇಶ್ ರನ್ನು ತರಾಟೆಗೆ ತೆಗೆದು ಕೊಂಡು ಸುತ್ತುವರಿದಿರುವ ಸುದ್ದಿ ತಿಳಿದು ತಲುಪಿದ ಏಶ್ಯಾನೆಟ್ ತಂಡದ ಮೇಲೆ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ.
ಸಭಾಂಗಣದ ಬಾಗಿಲು ಮುಚ್ಚಿ ಕಾರ್ಯದರ್ಶಿಯನ್ನು ತಡೆಯಲಾಗಿತ್ತು. ಈ ವಿಡಿಯೋವನ್ನು ಕಿಟಕಿ ಮೂಲಕ ಚಿತ್ರೀಕರಿಸುವ ವೇಳೆ ಕಾರ್ಯಕರ್ತರ ಗುಂಪು ವರದಿಗಾರನಿಗೆ ಹಲ್ಲೆ ಮಾಡಿ, ಕ್ಯಾಮೆರಾವನ್ನು ಹಾನಿ ಮಾಡಿರುವ ಬಗ್ಗೆ ದೂರಲಾಗಿದೆ.
ಘಟನೆಯನ್ನು ಮಂಜೇಶ್ವರ ಪ್ರೆಸ್ ಕ್ಲಬ್ ಹಾಗೂ ಪತ್ರಕರ್ತರ ಸಂಘದ ಕಾಸರಗೋಡು ಜಿಲ್ಲಾ ಸಮಿತಿ ಖಂಡಿಸಿದೆ.