ಎನ್ಆರ್ಸಿ: ದ.ಕ. ಜಿಲ್ಲೆಯಲ್ಲಿ ಭಾರೀ ವಿರೋಧ
ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಸಂಚು: ಆರೋಪ
ಮಂಗಳೂರು, ಅ.5: ಕರ್ನಾಟಕ ರಾಜ್ಯ ಸರಕಾರ ದಿಂದಲೂ ಇದೀಗ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಜಾರಿಗೊಳಿಸಲು ಚಿಂತನೆ ನಡೆಯುತ್ತಿ ರುವಂತೆಯೇ ದ.ಕ. ಜಿಲ್ಲೆಯಲ್ಲಿ ಭಾರೀ ವಿರೋಧಕ್ಕೆ ಕಾರಣವಾಗಿದೆ. ಒಂದು ವೇಳೆ ಎನ್ಆರ್ಸಿ ಜಾರಿ ಗೊಂಡಲ್ಲಿ ದಾಖಲೆಗಳನ್ನು ಒದಗಿಸದೆ ಕಾನೂನು ಸಹಕಾರ ಚಳವಳಿಗೆ ಹಲವು ಜನರು ಮುಂದಾಗಿದ್ದಾರೆ.
‘ಇದು ಕೇವಲ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಸಂಚು’ ಎಂಬುದು ವಿರೋಧಿಸುತ್ತಿರುವವರ ಒಕ್ಕೊರಳ ಅಭಿಪ್ರಾಯ. ನಾವೆಲ್ಲರೂ ಈ
ನೆಲದವರು. ಭಾರತೀಯರು. ಹಲವು ತಲೆಮಾರುಗಳಿಂದ ನಾವು ಈ ನೆಲದಲ್ಲಿ ನೆಲೆಸಿದ್ದೇವೆ. ಹಾಗಿರುವಾಗ ಮತ್ತೆ ನಮ್ಮ ಪೌರತ್ವವನ್ನು ಸಾಬೀತಪಡಿ ಸಬೇಕಾಗಿಲ್ಲ ಎಂದು ಎನ್ಆರ್ಸಿ ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಸರಕಾರದ ವಿರುದ್ಧ ಸಾಕಷ್ಟು ವಿರೋಧದ ಮಾತುಗಳು ಸದ್ಯ ಸಾಮಾಜಿಕ ಜಾಲಾಣಗಳ ಮೂಲಕ ವ್ಯಕ್ತವಾಗುತ್ತಿದೆ.
ಈ ವಿರೋಧ ವ್ಯಕ್ತಪಡಿಸುತ್ತಿರುವವರಲ್ಲಿ ಸ್ವಾತಂತ್ರ ಹೋರಾಟಗಾರರ ಮಕ್ಕಳೂ ಸೇರಿದ್ದಾರೆ. ಇತ್ತೀಚೆಗೆ ಐಎಎಸ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಣ್ಣನ್ ಗೋಪಿನಾಥನ್ರವರು ‘ನಾವು ದಾಖಲೆಗಳನ್ನು ಒದಗಿಸುವುದಿಲ್ಲ, ನಾವೆಲ್ಲಾ ಭಾರತೀಯರು’ ಎಂಬುದಾಗಿ ಟ್ವೀಟ್ ಮಾಡಿದ ಬೆನ್ನಿಗೇ ಅದಕ್ಕೆ ಬೆಂಬಲವಾಗಿ ದ.ಕ. ಜಿಲ್ಲೆಯಲ್ಲೂ ಹಲವು ಪ್ರಗತಿಪರರು, ಕೆಲ ಸ್ವಾತಂತ್ರ ಹೋರಾಟಗಾರರ ಮಕ್ಕಳಿಂದ ಎನ್ಆರ್ಸಿಗೆ ವಿರೋಧದ ಅಲೆ ವ್ಯಕ್ತವಾಗುತ್ತಿದೆ.
‘‘ನಾನು ತಿಳಿದುಕೊಂಡಂತೆ, ಕೆಲವೊಂದು ಸಂಶೋಧನಾ ಗ್ರಂಥಗಳನ್ನು ಅರಿತುಕೊಂಡಿರುವಂತೆ ನಾನು ಸೇರಿದಂತೆ ನಾವ್ಯಾರು ಇಲ್ಲಿನ ಮೂಲ ನಿವಾಸಿಗಳು ಅಲ್ಲ. ಆರ್ಯರು ಕೂಡಾ ಇಲ್ಲಿನವರಲ್ಲ ಎಂಬುದು ಸಾಬೀತಾಗಿದೆ. ಹಾಗಿರುವಾಗ ಈ ರಾಷ್ಟ್ರೀಯ ಪೌರತ್ವ ನೋಂದಣಿ ಯಾರಿಗಾಗಿ, ಯಾತಕ್ಕಾಗಿ?’’ ಎಂದು ಪ್ರಶ್ನಿಸುತ್ತಾರೆ ಸಾಮಾಜಿಕ ಹೋರಾಟಗಾರ್ತಿ ಗುಲಾಬಿ ಬಿಳಿಮಲೆ.
‘‘ಇದು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ಸಂಚು ಎಂಬುದು ನನ್ನ ಅನುಮಾನ. ನನ್ನಲ್ಲಿ ದಾಖಲೆಗಳನ್ನು ಕೇಳಲು ಬಂದರೆ ನಾನಂತೂ ತೋರಿಸುವುದಿಲ್ಲ ಎಂದು ನಿರ್ಧರಿಸಿದ್ದೇನೆ. ಏನು ಬೇಕಾದರೂ ಮಾಡಲಿ. ಇಲ್ಲಿನ ಮೂಲ ನಿವಾಸಿಗಳನ್ನು ಹೊರತುಪಡಿಸಿ ಎಲ್ಲರನ್ನೂ ಏನು ಬೇಕಾದರೂ ಮಾಡಲಿ. ಹಾಗಾದಾಗ ಮಾತ್ರವೇ ಅದು ನ್ಯಾಯ ಆಗಬಹುು’’ ಎನ್ನುತ್ತಾರೆ ಗುಲಾಬಿ ಬಿಳಿಮಲೆ.
ಎನ್ಆರ್ಸಿ ಅನಗತ್ಯ: ದ.ಕ. ಜಿಲ್ಲೆಯ ಹಿರಿಯ ಸ್ವಾತಂತ್ರ ಹೋರಾಟಗಾರ ಸಿಂಪ್ಸನ್ ಸೋನ್ಸ್ ರವರ ಪುತ್ರ, ಸಾಮಾಜಿಕ ಕಾರ್ಯಕರ್ತ ರೆಜಿನಾಲ್ಡ್ ಸೋನ್ಸ್ ಪ್ರಕಾರ ಎನ್ಆರ್ಸಿ ಅಗತ್ಯವೇ ಇಲ್ಲ. ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಈ ಎನ್ಆರ್ಸಿ ಮಾಡಲಾಗುತ್ತಿದೆ. ಇದನ್ನು ನಾನು ವಿರೋಧಿಸುತ್ತೇನೆ. ಒಂದು ಸಮುದಾಯವನ್ನು ಹೊರಗಿಟ್ಟು ನಡೆಸಲಾಗುತ್ತಿರುವ ಈ ಎನ್ಆರ್ಸಿ ಸಂವಿಧಾನ ವಿರೋಧಿ. ಸರಿ ಕಾಣದವರು ಇದನ್ನು ವಿರೋಧಿಸುವುದು ಕರ್ತವ್ಯವಾಗಿದೆ. ಯಾವುದೋ ಒಂದು ಸಮುದಾಯವನ್ನು ವ್ಯವಸ್ಥೆಯ ಹೊರಗಿಡುವುದು ತಪ್ಪು ಎನ್ನುತ್ತಾರೆ ರೆಜಿನಾಲ್ಡ್ ಸೋನ್ಸ್.
ಹಿರಿಯ ಸ್ವಾತಂತ್ರ ಹೋರಾಟಗಾರ ಬಿ.ವಿ. ಕಕ್ಕಿಲ್ಲಾಯ ಅವರ ಪುತ್ರ, ನಗರದ ಖ್ಯಾತ ವೈದ್ಯರಾದ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಕೂಡಾ ಎನ್ಆರ್ಸಿಯನ್ನು ವಿರೋಧಿಸುತ್ತಿದ್ದು, ಈ ಬಗ್ಗೆ ಒಗ್ಗಟ್ಟಾಗಿ ವಿರೋಧ ವ್ಯಕ್ತಪಡಿಸಬೇಕಾಗಿದೆ ಎನ್ನುತ್ತಾರೆ.
‘‘ನಾವು ದಾಖಲೆಗಳನ್ನು ಒದಗಿಸುವುದಿಲ್ಲ. ರಾಜ್ಯ ಸರಕಾರಕ್ಕೆ ಸಾಧ್ಯವಾದರೆ ನಮ್ಮನ್ನೆಲ್ಲಾ ದೇಶದಿಂದ ಹೊರಕಳುಹಿಸಲಿ’’ ಎನ್ನುತ್ತಾರೆ ಡಾ. ಶ್ರೀನಿವಾಸ ಕಕ್ಕಿಲ್ಲಾಯ.
ಈ ದೇಶದ ಪ್ರಜೆಗಳು ಯಾರೆಂಬುದನ್ನು ತಿಳಿಯಲು ಆಡಳಿತ ವ್ಯವಸ್ಥೆ ಇದೆ. ಪೊಲೀಸ್ ಇಲಾಖೆ ಇದೆ. ನಮ್ಮ ರಾಜ್ಯದಲ್ಲಿ ಉದಾಹರಣೆಗೆ ಒಂದು ಲಕ್ಷ ಜನ ಹೊರ ದೇಶಗಳಿಂದ ಅಕ್ರಮವಾಗಿ ಬಂದು ನೆಲೆಸಿದವರು ಇರಬಹುದೆಂದು ಅಂದಾಜಿಸೋಣ. ಅದಕ್ಕಾಗಿ ರಾಜ್ಯದ 6 ಕೋಟಿ ಜನ ತಲೆಕೆಡಿಸಿಕೊಳ್ಳಬೇಕೇ? ಕಿರುಕುಳ ನೀಡಬೇಕೇ? ಅವರೆಲ್ಲಾ ತಮ್ಮ ನಾಗರಿಕತೆಯನ್ನು ಸಾಬೀತುಪಡಿಸಬೇಕೇ? ಎಷ್ಟು ಜನರಲ್ಲಿ ತಮ್ಮ ಪೌರತ್ವದ ಬಗ್ಗೆ ದಾಖಲೆಗಳಿರುತ್ತದೆ. ಇದೊಂದು ರೀತಿಯ ಮಾನಸಿಕ ಹಿಂಸೆ ಅಲ್ಲದೆ ಮತ್ತಿನ್ನೇನು?. ಕರ್ನಾಟಕಕ್ಕೆ ಪಾಕಿಸ್ತಾನವಾಗಲಿ, ಬಾಂಗ್ಲಾ ಆಗಲಿ ಅಥವಾ ಚೀನಾದ ಜೊತೆಗಾಗಲಿ ಗಡಿಯನ್ನು ಹೊಂದಿಲ್ಲ. ಹಾಗಾಗಿ ಆ ದೇಶಗಳಿಂದ ಇಲ್ಲಿಗೆ ಅದೆಷ್ಟು ಜನ ಬಂದಿರಬಹುದು. ಅವರನ್ನು ಕಂಡು ಹಿಡಿಯಲು ನಮ್ಮಲ್ಲಿರುವ ಆಡಳಿತ ವ್ಯವಸ್ಥೆಯಿಂದ ಸಾಧ್ಯವಿಲ್ಲವೇ? ಇದರ ಒಳಸಂಚು ಬೇರೇನೇ ಇದೆ. ಹಾಗಾಗಿ ನಾನು ಇದನ್ನು ವಿರೋಧಿಸುತ್ತೇನೆ.
ರೆಜಿನಾಲ್ಡ್ ಸೋನ್ಸ್, ಸಾಮಾಜಿಕ ಕಾರ್ಯಕರ್ತ