ಅ.13: ‘ಪಂಚಮದ ಇಂಚರ ವಿವೇಕ ಸ್ಮತಿ 2019’ ಕಾರ್ಯಕ್ರಮ
ಮಂಗಳೂರು, ಅ.10: ರಾಮಕೃಷ್ಣ ಮಠ ಮಂಗಳಾದೇವಿ, ಸುರತ್ಕಲ್ನ ಚಿರಂತನ ಚಾರಿಟೇಬಲ್ ಟ್ರಸ್ಟ್ದ ಪಂಚಮದ ಇಂಚರ ಬಳಗದ ಸಂಯುಕ್ತ ಆಶ್ರಯದಲ್ಲಿ ಅ.13ರಂದು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ರಾಮಕೃಷ್ಣ ಮಠದ ವಿವೇಕಾನಂದ ಸಭಾಂಗಣದಲ್ಲಿ ಹಿಂದುಸ್ಥಾನಿ ಸಂಗೀತ ಕಲಾವಿದರ ಸಮ್ಮಿಲನ-ಶಾಸ್ತ್ರೀಯ ಸಂಗೀತ ಹಬ್ಬ ‘ಪಂಚಮದ ಇಂಚರ ವಿವೇಕ ಸ್ಮತಿ 2019’ ಕಾರ್ಯಕ್ರಮ ನಡೆಯಲಿದೆ ಎಂದು ಜಾದೂ ಕಲಾವಿದ ಜೂನಿಯರ್ ಶಂಕರ್ ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಸಂಗೀತೋತ್ಸವಕ್ಕೆ ಚಾಲನೆ ನೀಡುವರು. ಬೆಳಗ್ಗಿನಿಂದ ಸಂಜೆಯವರೆಗೆ ನಡೆಯುವ ಈ ಸಂಗೀತೋತ್ಸವದಲ್ಲಿ ಹಿಂದುಸ್ಥಾನಿ ಸಂಗೀತ ಕ್ಷೇತ್ರದ ವಿವಿಘ ಘರಾನಾಗಳ ವರಿಷ್ಠ ಕಲಾವಿದರ ಶಿಷ್ಯರುಗಳಿಂದ ಒಟ್ಟು 8 ಕಛೇರಿಗಳು ನಡೆಯಲಿವೆ. ಗ್ವಾಲಿಯರ್, ಜೈಪುರ್ ಅತ್ರೋಲಿ, ಆಗ್ರಾ, ಪಟಿಯಾಲಾ ಘರಾನಾಗಳ ಗಾಯಕರು ತಮ್ಮ ವಿಶಿಷ್ಠ ಶೈಲಿಯ ಸಂಗೀತ ಪ್ರಸ್ತುತಿಯೊಂದಿಗೆ ರಸದೌತಣ ನೀಡಲಿದ್ದಾರೆ ಎಂದು ಹೇಳಿದರು.
ಶಾಸ್ತ್ರೀಯ ಗಾಯನದ ಜೊತೆಗೆ ಠುಮ್ರಿ, ವಚನ, ಭಜನ್ಗಳಲ್ಲದೆ ಬಾನ್ಸುರಿ ಹಾಗೂ ಸಿತಾರ್ ವಾದನಗಳ ವೈವಿಧ್ಯವೂ ಸಂಗೀತ ರಸಿಕರಿಗೆ ಲಭ್ಯವಾಗಲಿದೆ. ಉತ್ತರ ಕನ್ನಡ, ಬೆಂಗಳೂರು, ಧಾರವಾಡ, ಮುಂಬೈ, ಕಲ್ಕತ್ತಾ, ವಾರಣಾಸಿ ಮತ್ತಿತರ ಕಡೆಯ ಕಲಾವಿದರಲ್ಲದೆ ಉಡುಪಿ ಮಂಗಳೂರು ವ್ಯಾಪ್ತಿಯ 25ಕ್ಕೂ ಹೆಚ್ಚಿನ ಕಲಾವಿದರು ‘ಪಂಚಮದ ಇಂಚರ ವಿವೇಕ ಸ್ಮತಿ 2019’ ರಾಷ್ಟ್ರೀಯ ಸಂಗೀತ ಮಹೋತ್ಸವದಲ್ಲಿ ಸಮಯಾಧರಿತ ರಾಗಗಳ ಪ್ರಸ್ತುತಿಯೊಂದಿಗೆ ತಮ್ಮ ಸಂಗೀತ ಕಛೇರಿಗಳನ್ನು ನಡೆಸಿಕೊಡಲಿದ್ದಾರೆ ಎಂದು ಶಂಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಭಾರವಿ ದೇರಾಜೆ, ಸತೀಶ್ ಕಾಮತ್ ಉಪಸ್ಥಿತರಿದ್ದರು.