ಭಟ್ಕಳ: ಸಮುದ್ರದಲ್ಲಿ ಅಪಾಯದಲ್ಲಿದ್ದವರನ್ನು ರಕ್ಷಿಸಿದ ಮೀನುಗಾರರು
ಭಟ್ಕಳ: ತಾಲೂಕಿನ ನೇತ್ರಾಣಿ ಗುಡ್ಡದ ಸಮೀಪ ಬೋಟೊಂದಕ್ಕೆ ನೀರು ನುಗ್ಗಿ ಅಪಾಯದಲ್ಲಿರುವುದನ್ನು ಅರಿತು ತಕ್ಷಣ ಇನ್ನೊಂದು ಬೋಟಿನವರು ಮೀನುಗಾರರನ್ನು ರಕ್ಷಿಸಿರುವ ಘಟನೆ ವರದಿಯಾಗಿದೆ.
ಮೀನುಗಾರಿಕೆಗೆ ತೆರಳಿದ್ದ ಶ್ರೀ ಮೂಕಾಂಬಿಕಾ ಎನ್ನುವ ಬೋಟು ನೇತ್ರಾಣಿಯ ಸಮೀಪ ಮೀನುಗಾರಿಕೆ ಮಾಡುತ್ತಿರುವಾಗ ಬೋಟಿನ ಒಳಗಡೆಯಲ್ಲಿ ನೀರು ಬರಲಾರಂಭಿಸಿದ್ದನ್ನು ಗಮನಿಸಿದ ಮೀನುಗಾರರು ಹತ್ತಿರದಲ್ಲಿಯೇ ಮೀನುಗಾರಿಕೆ ಮಾಡುತ್ತಿರುವ ಇತರ ಬೋಟುಗಳಿಗೆ ತಿಳಿಸಿದ್ದು, ಅವರು ತಕ್ಷಣ ಬಂದು ಮೀನುಗಾರರನ್ನು ರಕ್ಷಿಸಿದೆ. ಬೋಟಿನಲ್ಲಿ ಒಟ್ಟು 28 ಮೀನುಗಾರರಿದ್ದು ಬೇರೆ ಬೇರೆ ಮೀನುಗಾರಿಕಾ ಬೋಟುಗಳಲ್ಲಿ ಭಟ್ಕಳ ಬಂದರಕ್ಕೆ ಬಂದಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ. (ಶಿತಾಲಿ ನವದುರ್ಗ) ಶ್ರೀ ಮೂಕಾಂಬಿಕಾ ಮೀನುಗಾರಿಕಾ ಬೋಟು ಕೂಡಾ ಭಟ್ಕಳ ಬಂದರಕ್ಕೆ ಬಂದು ತಲುಪಿರುವ ಕುರಿತೂ ವರದಿಯಾಗಿದೆ. ಬೋಟು ಗಂಗೊಳ್ಳಿಯ ಮಧುಕರ ಪೂಜಾರಿ ಎನ್ನುವವರಿಗೆ ಸೇರಿದ್ದೆನ್ನಲಾಗಿದ್ದು ಭಟ್ಕಳದಿಂದ ಮೀನುಗಾರಿಕೆಗೆ ತೆಗೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ತಕ್ಷಣ ಕರಾವಳಿ ಕಾವಲು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಬಂದರಕ್ಕೆ ಹೋಗಿದ್ದು ಮಾಹಿತಿ ಪಡೆದು ಬೋಟು ಹಾಗೂ ಕಲಾಸಿಗಳ ರಕ್ಷಣೆಯ ಕುರಿತು ಕ್ರಮ ಕೈಗೊಂಡಿದ್ದಾರೆ.