ಗಾಂಧಿಯ ಬಗ್ಗೆ ಸುಳ್ಳುಗಳನ್ನು ಹರಡುವ ಕೆಲಸ: ಡಾ.ಮಹಾಬಲೇಶ್ವರ್ ರಾವ್
ಉಡುಪಿ, ಅ.11: ಮಹಾತ್ಮ ಗಾಂಧಿಯವರನ್ನು ಬದುಕಿದ್ದಾಗ ಆರು ಬಾರಿ ಕೊಲ್ಲಲು ಪ್ರಯತ್ನಿಸಲಾಯಿತು. ಅವರ ನಿಧನ ನಂತರ ಬಗೆ ಬಗೆಯ ಸುಳ್ಳುಗಳನ್ನು ಹರಡಿ ದಿನಂಪ್ರತಿ ಗಲ್ಲಿಗೇರಿಸುವ ಕೆಲಸ ನಡೆಯುತ್ತಿದೆ. ಅವರು ನಡೆಸಿದ ಸತ್ಯಾನ್ವೇಷಣೆಯನ್ನು ಅಪಹಾಸ್ಯ ಮಾಡಲಾಗುತ್ತಿದೆ. ಮಹಾತ್ಮರನ್ನು ಸರಿಯಾಗಿ ಅರ್ಥೈಸುವ ಕೆಲಸ ಆಗಬೇಕೆಂದು ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ್ ರಾವ್ ಹೇಳಿದ್ದಾರೆ.
ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಇತ್ತೀಚೆಗೆ ಆಯೋಜಿಸಲಾದ ಗಾಂಧಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಪ್ರಕೃತಿ ಚಿಕಿತ್ಸಾ ತಜ್ಞ ಡಾ.ಶಿವರಾಜ್ ವಿ.ಪಾಟೀಲ್ ಗಾಂಧಿ ಮತ್ತು ಪ್ರಕೃತಿ ಚಿಕಿತ್ಸೆ ವಿಷಯದ ಕುರಿತು ಮಾತನಾಡಿದರು. ಕಾಲೇಜಿನ ಪ್ರಭಾರ ಪ್ರಾಂಶು ಪಾಲ ಪ್ರೊ.ರಾಮಚಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು.
ಡಾ.ರಾಮದಾಸ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ನಿತ್ಯಾ ನಂದ ಎನ್. ಕಾರ್ಯಕ್ರಮ ನಿರೂಪಿಸಿದರು. ಸುಕನ್ಯಾ ವಂದಿಸಿದರು. ಈ ಸಂದರ್ಭದಲ್ಲಿ ಪುಸ್ತಕಗಳಲ್ಲಿ ಗಾಂಧಿ ಎಂಬ ಪುಸ್ತಕ ಪ್ರದರ್ಶನ ಏರ್ಪಡಿಸ ಲಾಗಿತ್ತು.