ಬೆಳ್ತಂಗಡಿ: ಪಿಎಫ್ಐ ವತಿಯಿಂದ 'ಜನಾರೋಗ್ಯವೇ ರಾಷ್ಟ್ರ ಶಕ್ತಿ - ರಾಷ್ಟ್ರೀಯ ಆರೋಗ್ಯ ಅಭಿಯಾನ'
ಬೆಳ್ತಂಗಡಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ವತಿಯಿಂದ ಇಂದು ಜನಾರೋಗ್ಯವೇ ರಾಷ್ಟ್ರ ಶಕ್ತಿ - ರಾಷ್ಟ್ರೀಯ ಆರೋಗ್ಯ ಅಭಿಯಾನಕ್ಕೆ ಮ್ಯಾರಥಾನ್ ಮೂಲಕ ಚಾಲನೆ ನೀಡಲಾಯಿತು. ಬೆಳ್ತಂಗಡಿ ಚರ್ಚ್ ರೋಡ್ ನಿಂದ ಬಸ್ಸು ನಿಲ್ದಾಣದವರೆಗೆ ಮ್ಯಾರಥಾನ್ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾಧ್ಯಕ್ಷರಾದ ಇಕ್ಬಾಲ್ ಬಂಗೇರಕಟ್ಟೆ ವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಬೆಳ್ತಂಗಡಿಯ ಬಸ್ಸು ನಿಲ್ದಾಣದ ಮುಂದೆ ಪಿ ಎಫ್ ಐ ಕಾರ್ಯಕರ್ತರಿಂದ ದೈಹಿಕವಾಗಿ ಶಕ್ತರಾಗುವ ಹಲವಾರು ರೀತಿಯ ಆಕರ್ಷಕ ದೈಹಿಕ ಪ್ರದರ್ಶನ, ಯೋಗ, ಆತ್ಮರಕ್ಷಣಾ ಕಲೆ, ಮಾಧಕ ದ್ರವ್ಯ ವಿರೋಧಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಸ್ ಡಿ ಪಿ ಐ ರಾಷ್ಟ್ರೀಯ ಕಾರ್ಯದರ್ಶಿ ಆಲ್ಫಾನ್ಸೋ ಫ್ರಾಂಕೋ ಮಾತನಾಡಿ " ಭಾರತ ಸದೃಢ ರಾಷ್ಟ್ರವಾಗಬೇಕಾದರೆ ಜನರು ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಂತರಾಗಬೇಕಾಗಿದೆ. ದೇಶೀಯ ಆರೋಗ್ಯ ವ್ವವಸ್ಥೆ ಹಲವಾರು ಕಾರಣಗಳಿಂದ ಹದಗೆಟ್ಟಿದ್ದು, ಇದರ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನಾವೆಲ್ಲರೂ ಮುಂದಾಗಬೇಕು" ಎಂದರು.
ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾ ಸಮಿತಿ ಸದಸ್ಯ ತ್ವಾಹಿರ್ ಪುಂಜಾಲಕಟ್ಟೆ ಪ್ರಸಕ್ತದ ಭಾರತದಲ್ಲಿ ಚಾಲನೆಯಾಗುತ್ತಿರುವಂತಹ ಕರಾಳ ಕಾನೂನುಗಳ ವಿರುದ್ಧ ಮುಂದಿನ ದಿನಗಳಲ್ಲಿ ಭಾರತೀಯ ಪ್ರತಿಯೊಂದು ದೇಶೀ ನೈಜ ಪ್ರಜೆಗಳು ಸಂವಿಧಾನಾತ್ಮಕವಾಗಿ ಕಡ್ಡಾಯವಾಗಿ ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯ ವಂತರಾಗಬೇಕು ಮತ್ತು ಎಂದೆಂದಿಗೂ ಆತ್ಮರಕ್ಷಣಾ ಕಲೆಯಲ್ಲಿ ನಿರತರಾಗಬೇಕು ಎಂದರು.
ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ಕಾರ್ಯದರ್ಶಿ ಮುಸ್ತಫಾ ಜಿ ಕೆ, ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನ ಸಭಾ ಅಧ್ಯಕ್ಷ ನವಾಝ್ ಶರೀಫ್ ,ಎಸ್ ಡಿ ಪಿ ಐ ದ.ಕ ಜಿಲ್ಲಾ ಸಮಿತಿ ಸದಸ್ಯ ಅಕ್ಬರ್ ಬೆಳ್ತಂಗಡಿ, ನಿಸಾರ್ ಸುನ್ನತ್ ಕೆರೆ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.