ಪೌರ ಕಾರ್ಮಿಕ ಕೆ.ರಂಗರಿಗೆ ಸನ್ಮಾನ
ಉಡುಪಿ, ಅ.12: ಉಡುಪಿ ನಗರಸಭೆಯಲ್ಲಿ ಪೌರ ಕಾರ್ಮಿಕರಾಗಿದ್ದ ಕೆ. ರಂಗ ಹಾಗೂ ಅಮ್ಮಣ್ಣಿ ದಂಪತಿಗಳನ್ನು ಗುಂಡಿಬೈಲು ಪಾಡಿಗಾರು ಮಠದ ರಸ್ತೆಯ ನಂದಗೋಕುಲದಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು.
ಪೌರ ಕಾರ್ಮಿಕ ವೃತ್ತಿಯಿಂದ ನಿವೃತ್ತರಾದ ಕೆ. ರಂಗರನ್ನು ಹಿರಿಯ ಮುಖ್ಯ ಶಿಕ್ಷಕರಾದ ಸುಧಾಕರ ಶೆಟ್ಟಿ ಫಲಪುಷ್ಪ ಶಾಲಿನೊಂದಿಗೆ ಸನ್ಮಾನಿಸಿ ಅವರ ನಿಷ್ಕಾಮ ಸೇವೆಯನ್ನು ನೆನಪಿಸುತ್ತಾ ನಿವೃ್ತ ಜೀವನಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರಂಗ, ತನ್ನ ನೆನಪಿನ ಬುತ್ತಿಯನ್ನು ಬಿಚ್ಚಿ ಮಾತನಾಡಿದರು. ತಾನು ಡಾ.ವಿ.ಎಸ್.ಆಚಾರ್ಯರು ನಗರಸಭಾ ಅಧ್ಯಕ್ಷರಾಗಿದ್ದ ಕಾಲದಲ್ಲಿ ಕೆಲಸಕ್ಕೆ ನಿಯುಕ್ತಿಯಾಗಿದ್ದೆ ಎಂದರು. ನನ್ನ ತಾಯಿ ಮಾಚಿ ಹಾಗೂ ತಂದೆ ಚಿಂಗ ಸಹ ಪೌರ ಕಾರ್ಮಿಕರಾಗಿದ್ದು, ಸ್ವಾತಂತ್ರ್ಯ ಪೂರ್ವದಿಂದಲೂ ನಗರದ ಅಂದಚೆಂದಕ್ಕಾಗಿ ದುಡಿದಿದ್ದರು ಎಂದು ಗತ ಕಾಲದ ಉಡುಪಿಯನ್ನು ನೆನೆಸಿ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.
ಉದ್ಯಮಿಗಳಾದ ಗಣೇಶ್ ಆಚಾರ್ಯ, ಹರೀಶ್ ಹಾಗೂ ವೇಣು ಗೋಪಾಲ ಉಪಸ್ಥಿತರಿದ್ದರು. ನಂದಗೋಕುಲ ನಂದಕಿಶೋರ್ ಶೆಟ್ಟಿ ವಂದಿಸಿದರು.